ರಾಜೇಂದ್ರ ಸಿಂಗ್ ಬಾಬುರ ಹೊಸ ಚಿತ್ರ 'ರಕ್ತಾಕ್ಷ' ಸುತ್ತ
ಕುರಿ, ಕತ್ತೆ, ಕೋತಿಗಳು ಸಾರ್! ಹಾಸ್ಯ ಪ್ರಧಾನ ಚಿತ್ರಗಳಿಂದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ಈಗ ಮತ್ತ್ತೆ ಮುತ್ತಿನ ಹಾರ ಕಡೆಗೆ ಹೊರಳಿದ್ದಾರೆ. ಸಾಕಷ್ಟು ಸಂಶೋಧನೆಯ ನಂತರ ತಮ್ಮ ಪುತ್ರ ಆದಿತ್ಯಾನಿಗಾಗಿ ಮತ್ತೊಂದು ಮುತ್ತಿನಂಥ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ ಚಿ ತ್ರಕ್ಕೆ 'ರಕ್ತಾಕ್ಷ' ಎಂದು ಪುರಾಣ ಪುಣ್ಯ ಕಥೆಗಳಲ್ಲಿ ಬರುವ ರಾಕ್ಷಸನ ಹೆಸರಿಟ್ಟಿದ್ದಾರೆ. ರಕ್ತಾಕ್ಷನಿಗೆ ವಿರೂಪಾಕ್ಷ ಎಂಬ ಸೋದರ ಸಹ ಇದ್ದ ಎನ್ನುವುದು ಪುರಾಣದ ಕಥೆ.
ರಕ್ಷಣಾ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ಧರಿಸಿದ್ದಾರೆ. ನಾನಾ ರಾಜಕೀಯ ಒತ್ತಡದಿಂದ ಹೇಗೆ ಸೈನಿಕರು ಸಂಕಷ್ಟಕ್ಕೆ ಈಡಾಗುತ್ತಾರೆ ಎನ್ನುವುದೆ ಚಿತ್ರದ ಕಥೆ. ಈ ಎಲ್ಲಾ ಅಂಶಗಳೊಂದಿಗೆ ಒಂದಿಷ್ಟು ಸೆಂಟಿಮೆಂಟು, ಆಕ್ಷನ್, ಪ್ರೀತಿ ಪ್ರೇಮಗಳನ್ನು ಬೆರಸಿ ದೇಶಭಕ್ತಿ ಉಕ್ಕುವಂತೆ ಚಿತ್ರವನ್ನು ಎಸ್.ವಿ.ಆರ್ ಬ್ಯಾನರ್ನಡಿ ನಿರ್ಮಿಸಲಾಗುತ್ತಿದೆ. 250ಕ್ಕೂ ಹೆಚ್ಚು ಸಿನೆಮಾಗಳಿಗೆ ಚಿತ್ರಕಥೆ ಬರೆದಿರುವ ಸೆಲ್ವರಾಜ್ ಹಾಗೂ ಯಶಸ್ವಿ ಸಂಭಾಷಣೆಕಾರ ಎಂ.ಎಸ್.ರಮೇಶ್ ಅವರನ್ನು ತಮ್ಮ ತಂಡಕ್ಕೆ ಬಾಬು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕಾಗಿ ರಾಜೇಂದ್ರ ಸಿಂಗ್ ಬಾಬು ಸಾಕಷ್ಟು ಹೋಂವರ್ಕ್ ಸಹ ಮಾಡಿದ್ದಾರೆ. ನನ್ನ ಬಳಿ ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ 27 ಪುಟಗಳ ವರದಿ ಇದೆ. ಅದೆಲ್ಲವನ್ನೂ ಓದಿದ್ದೇನೆ. ಸಿಬಿಐ ಮುಖ್ಯಸ್ಥ ಮಹದೇವನ್ ಅವರು ಚಾಣಾಕ್ಷತನದಿಂದ ವರ್ತಿಸಿದ ಸಂದರ್ಭಗಳನ್ನು ಗಮನಿಸಿದ್ದೇನೆ. ರಕ್ಷಣಾ ಇಲಾಖೆಯ ಉನ್ನತ ದರ್ಜೆ ಅಧಿಕಾರಿಗಳ ನೋವು ನಲಿವುಗಳನ್ನು ಸಾಮಾನ್ಯ ಜನಕ್ಕೆ ಅರ್ಥವಾಗುವಂತೆ ತೆರೆಗೆ ತರಲು ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಬಾಬು.
ಸಮುದ್ರತೀರದ ದೃಶ್ಯಗಳು ಚಿತ್ರಕ್ಕೆ ತೀರಾ ಅವಶ್ಯಕವಾಗಿ ಬೇಕಾದ ಕಾರಣ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನವದೆಹಲಿ, ದುಬೈ ಮತ್ತು ಸಿಂಗಪುರಗಳಲ್ಲೂ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ, ಇಬ್ಬರು ನಾಯಕಿಯರಿದ್ದಾರೆ. ಪೈಲಟ್ ಒಬ್ಬರ ಯುದ್ಧ ವಿಧವೆಯಾಗಿ ಸುಧಾರಾಣಿ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ಹಲವಾರು ಯುದ್ಧ ವಿಧವೆಯರನ್ನು ಸಂಪರ್ಕಿಸಿ ವಿವರಗಳನ್ನು ಸಂಗ್ರಹಿಸಿರುವುದಾಗಿ ಬಾಬು ತಿಳಿಸಿದರು. ಒಟ್ಟಿನಲ್ಲಿ ಮತ್ತೊಂದು ಮುತ್ತಿನ ಹಾರ ಸಿದ್ಧವಾಗುತ್ತಿದೆ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications