ಅದ್ವೈತ ಅಜಯ್ ಗೆ ಹೊಸ ನಾಯಕಿ ಬೇಕಂತೆ!
ಕೇವಲ 35 ಸಾವಿರ ಬಂಡವಾಳದೊಂದಿಗೆ ಡಿಜಿಟಿಲ್ ಕೆಮೆರಾ ಬಳಸಿ "ನವಿಲಾದವರು" ಎಂಬ ಸದಭಿರುಚಿ ಚಿತ್ರ ನಿರ್ದೇಶಿಸಿದ ಗಿರಿರಾಜ್ ಅವರಿಗೆ ಏಕ್ಸ್ ಕ್ಯೂಸ್ ಮಿ ಖ್ಯಾತಿ ನಿರ್ಮಾಪಕ ಎನ್ ಎಂ ಸುರೇಶ್ ಬೆಂಬಲ ಸಿಕ್ಕಿದೆ. ಸೋಲಿನ ಮೇಲೆ ಸೋಲು ಕಂಡರೂ ಎದೆಗುಂದರೆ ಹೊಸಬರಿಗೆ ಅವಕಾಶ ನೀಡುವ ಸುರೇಶ್ ಅವರ ಧೈರ್ಯ ಮೆಚ್ಚಲೇಬೇಕು. ಸದ್ಯಕ್ಕೆ, ಸುರೇಶ್ ನಿರ್ಮಾಣದ "ಅದ್ವೈತ" ಚಿತ್ರಕ್ಕೆ ಹೊಸ ನಾಯಕಿ ಹುಡುಕಾಟ ನಡೆದಿದೆ.
ಏಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ತನ್ನನ್ನು ಚಿತ್ರರಂಗಕ್ಕೆ ಕರೆತಂದ ಸುರೇಶ್ ಅವರು ಕೇಳಿದ ತಕ್ಷಣ ಈ ಪ್ರಾಜೆಕ್ಟ್ ಅನ್ನು ಅಜಯ್ ರಾವ್ ಒಪ್ಪಿಕೊಂಡಿದ್ದಾರೆ. ಮೂಲಗಳ ಪ್ರಕಾರ ರಾಯಲ್ ಸ್ಟಾರ್ ಎಂದು ಕರೆಸಿಕೊಳ್ಳುವ ಹಸನ್ಮುಖಿ ನಟ ಅಜಯ್ ರಾವ್ ಅವರು ಸಂಭಾವನೆ ಪಡೆಯದೆ ಪುಕ್ಕಟೆ ಅಭಿನಯಿಸುತ್ತಿದ್ದಾರಂತೆ.
ನಾಯಕಿಯ ಹುಡುಕಾಟದ ಜೊತೆಗೆ ಇತರೆ ಪಾತ್ರವರ್ಗವನ್ನು ಅಂತಿಮಗೊಳಿಸುವಲ್ಲಿ ಸುರೇಶ್ ಹಾಗೂ ನಿರ್ದೇಶಕ ಗಿರಿರಾಜ್ ನಿರತರಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಸುರೇಶ್ ತಿಳಿಸಿದರು. 'ಅದ್ವೈತ' ಚಿತ್ರವು ಜನವರಿಯ ತಿಂಗಳಿನಲ್ಲಿ ಸೆಟ್ಟೇರಲಿದ್ದು, ಚಿತ್ರೀಕರಣಕ್ಕಾಗಿ ಕೂಡಾ ಒಳ್ಳೆ ಲೊಕೇಷನ್ ನೋಡುತ್ತಿದ್ದೇವೆ ಎಂದು ಗಿರಿರಾಜ್ ಹೇಳಿದರು.
ಎಕ್ಸ್ ಕ್ಯೂಸ್ ಮಿ ಭರ್ಜರಿ ಯಶಸ್ಸಿನ ನಂತರ 7"ಓ ಕ್ಲಾಕ್, ಚಪ್ಪಾಳೆ, ತನನಂ ಹಾಗೂ ತೆಲುಗಿನಲ್ಲಿ ಸೀನು ವಾಸಂತಿ ಲಕ್ಷ್ಮಿ ಎಂಬ ಚಿತ್ರಗಳನ್ನು ನಿರ್ಮಿಸಿ ಸಾಲು ಸಾಲಾಗಿ ಕೈ ಸುಟ್ಟುಕೊಂಡ ಸುರೇಶ್ ಎರಡನೇ ಇನ್ನಿಂಗ್ಸ್ ನಲ್ಲಿ ಕೂಡಾ ಅವರ ಬಹು ನಿರೀಕ್ಷಿತ ಚಿತ್ರ ರಾವಣ ಗೆಲುವು ಕಾಣಲಿಲ್ಲ. ಆದರೆ, ಈ ಎಲ್ಲಾ ಚಿತ್ರಗಳಲ್ಲೂ ಹೊಸ ಮುಖಗಳಿಗೆ ಅವಕಾಶ ನೀಡಿರುವ ತೃಪ್ತಿಯಿದೆ ಎಂದು ಸುರೇಶ್ ಹೇಳುತ್ತಾರೆ. ಅದು ನಿಜ ಕೂಡಾ. [ಅಜಯ್ ರಾವ್]


Click it and Unblock the Notifications











