ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
ವರನಟ ಡಾ.ರಾಜ್ ಕುಮಾರ್ ಕುರಿತು ಬಿಗ್ ಬಿ ಅಮಿತಾಬ್ ಬಚ್ಚನ್ ಏನಂತಾರೆ? ಅಣ್ಣಾವ್ರ ನಟನೆಯನ್ನು ಅವರು ಇಷ್ಟ ಪಡುತ್ತಿದ್ದರೆ? ಎನ್ನುವ ಪ್ರಶ್ನೆಗಳಿಗೆ ಮಾಯ ಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'Dr Rajkumar Our Annavaru'ಎಂಬ ಕಿರುಚಿತ್ರಬೆಳಕು ಚೆಲ್ಲುತ್ತದೆ.
ಕಳೆದ ವಾರ ತಿರುವನಂತರಪುರದಲ್ಲಿ ನಡೆದ ಚಿತ್ರೋತ್ಸವದಲ್ಲಿ (SIGNS 2009) ತಾವು ನಿರ್ದೇಶಿಸಿರುವ ಕಿರುಚಿತ್ರವನ್ನು ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಮಾಯಚಂದ್ರ ಪಾತ್ರರಾಗಿದ್ದಾರೆ. ರಾಜ್ ಕುಮಾರ್ ಅವರೊಂದಿಗಿನ ತಮ್ಮ ಒಡನಾಡವನ್ನು ಅಮಿತಾಬ್ ಈ ಚಿತ್ರದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಅಪರೂಪದ ವ್ಯಕ್ತಿ ಎಂದು ಅಮಿತಾಬ್ ಬಣ್ಣಿಸಿದ್ದಾರೆ.

''ಡಾ.ರಾಜ್ ಒಬ್ಬ ಸರಳ ವ್ಯಕ್ತಿಯಾಗಿದ್ದರು. ಅಡಿಯಿಂದ ಮುಡಿಯವರೆಗೂ ಎತ್ತರದ ನಿಲುವುಳ್ಳ ವ್ಯಕ್ತಿ. ನನಗಂತೂ ಅವರು ಕಟ್ಟಕ್ಕರೆಯುಳ್ಳ ವ್ಯಕ್ತಿಯಾಗಿದ್ದರು. ಈ ಕಾರಣಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಯಾವುದೇ ಪಾತ್ರವಾಗಿರಲಿ, ಪೌರಾಣಿಕ, ಶ್ರೀಸಾಮಾನ್ಯ, ಶ್ರೀಮಂತ ವ್ಯಕ್ತಿ...ಆಯಾ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಅವರ ಪ್ರಭಾವಕ್ಕೆ ಒಳಗಾದವರಲ್ಲಿ ನಾನೂ ಒಬ್ಬ'' ಎಂದು ಅಮಿತಾಬ್ ಕಿರುಚಿತ್ರದಲ್ಲಿ ಹೇಳಿದ್ದಾರೆ.
ಮಾಯಚಂದ್ರ ಅವರು ರಾಜ್ ಕುಮಾರ್ ಅವರ ಗೆಳೆಯರು ಹಾಗೂ ಸಹವರ್ತಿಗಳ ಬಗ್ಗೆಯೂ ಈ ಕಿರುಚಿತ್ರದಲ್ಲಿ ಸಾಕಷ್ಟು ಮಾಹಿತಿ ನೀಡಿದ್ದಾರೆ. ತಿಪಟೂರು ರಾಮಸ್ವಾಮಿ, ಭಗವಾನ್, ಪಿ.ಬಿ.ಶ್ರೀನಿವಾಸ್, ಯು.ಆರ್.ಅನಂತಮೂರ್ತಿ ಮತ್ತು ಜಯಂತ ಕಾಯ್ಕಿಣಿ ಮಾತುಗಳನ್ನು ಕ್ಯಾಮೆರಾದಲ್ಲಿ ಬಂಧಿಸಲಾಗಿದೆ. ಐದು ಮಂದಿ ತಂಡದೊಂದಿಗೆ ಈ ಚಿತ್ರವನ್ನು ಎರಡು ವರ್ಷ ಕಾಲ ಕಷ್ಟಪಟ್ಟು ಮಾಯಚಂದ್ರ ನಿರ್ಮಿಸಿದ್ದಾರೆ. ತಾವು ನಿರ್ದೇಶಿಸಿರುವ ಕಿರುಚಿತ್ರವನ್ನು ಎಲ್ಲ ಚಿತ್ರೋತ್ಸವಗಳಲ್ಲೂ ಪ್ರದರ್ಶಿಸಬೇಕು ಎಂಬುದು ಅವರ ಆಸೆ. ''ಅವರೊಬ್ಬ ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ'' ಎನ್ನುತ್ತಾರೆ ಮಾಯಚಂದ್ರ.
ಈ ಕಿರುಚಿತ್ರದಲ್ಲಿ ರಾಜ್ ಕುಮಾರ್ ಅವರ ಪುತ್ರಿಯರಾದ ಲಕ್ಷ್ಮಿಮತ್ತು ಪೂರ್ಣಿಮಾ ಅವರು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಎಲ್ಲರೊಂದಿಗೂ ಅವರು ತಾಳ್ಮೆಯಿಂದ ವ್ಯವಹರಿಸುತ್ತಿದ್ದರು ಎಂದು ರಾಜ್ ಪುತ್ರಿ ಲಕ್ಷ್ಮಿ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ರಾಜ್ ರ ಧರ್ಮ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಪುತ್ರರಾದ ಪುನೀತ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸಹ ಕೆಲವೊಂದು ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡಿದ್ದಾರೆ.
ಇಲ್ಲಿ ಮುಖ್ಯವಾಗಿ ಮತ್ತೊಂದು ವಿಚಾರ ಹೇಳಬೇಕು, ಕಿರುಚಿತ್ರದಲ್ಲಿ ನಿರೂಪಕರಾಗಿ ಕಾಣಿಸುವ ರಮೇಶ್ ಅರವಿಂದ್ ರ ನಿರೂಪಣೆ ಗಮನ ಸೆಳೆಯುತ್ತದೆ.ರಾಜ್ ಹೇಗೆ ಸಾಂಸ್ಕೃತಿಕ, ಸಾಮಾಜಿಕ ವ್ಯಕ್ತಿಯಾಗಿದ್ದರು ಎಂಬುದು ಅವರ ಮಾತುಗಳಲ್ಲೇ ಕೇಳಬೇಕು. ಅಲ್ಲಲ್ಲಿ ಇಣುಕುವ 'ಹಣ್ಣೆಲೆ ಚಿಗುರಿದಾಗ' ಚಿತ್ರದ ತುಣುಕುಗಳು ಕಿರುಚಿತ್ರವನ್ನು ಮತ್ತಷ್ಟು ಸೊಗಸಾಗಿಸಿವೆ.
ಕಡೆಗೂ ಡಾ.ರಾಜ್ ಅಂಚೆ ಚೀಟಿಗೆ ಠಸ್ಸೆ ಒತ್ತಿದ ಕೇಂದ್ರ
ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ


Click it and Unblock the Notifications











