ಅಪ್ಪಟ ಬೆಳ್ಳಿ ಜೊತೆಗೆ ಬೆಳ್ಳಿತೆರೆಗೊಂದು ಅಪ್ಪಟ ಚಿತ್ರ!
ಚಿತ್ರ ನಿರ್ದೇಶಕ ಗುರುಪ್ರಸಾದ್ ಏನೇ ಮಾಡಿದರು ವಿಭಿನ್ನವಾಗಿರುತ್ತದೆ. ತಮ್ಮ ಮಹತ್ವಾಕಾಂಕ್ಷಿ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಆಮಂತ್ರಣ ಪತ್ರಿಕೆಯಲ್ಲೂ ವೈವಿಧ್ಯತೆಯನ್ನು ಮೆರೆದಿದ್ದಾರೆ. ವಿಶೇಷವಾಗಿ ರೂಪಿಸಿರುವ ಆಮಂತ್ರಣ ಪತ್ರಿಕೆಯ ಒಂದು ಪ್ರತಿ ದಟ್ಸ್ ಕನ್ನಡ ಕಚೇರಿಗೆ ತಲುಪಿದೆ.
ಹೊಸತನದಿಂದ ಕೂಡಿರುವ ಆಮಂತ್ರಣ ಪತ್ರಿಕೆ ಮೊದಲ ನೋಟದಲ್ಲೆ ಕಣ್ಣುಕುಕ್ಕುವಂತ್ತಿದೆ. ವಿಶೇಷವಾಗಿ ಕಾರ್ಡ್ ಬೋರ್ಡ್ ನಲ್ಲಿ ವಿನ್ಯಾಸಗೊಳಿಸಿರುವ ಆಮಂತ್ರಣ ಪತ್ರಿಕೆಯನ್ನು ಕ್ಲಾಪ್ ಮಾದರಿಯಲ್ಲಿ ರೂಪಿಸಲಾಗಿದೆ. ಇದರ ಒಂದು ಅಂಚಿನಲ್ಲಿ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗಿದೆ.
ಬೆಳ್ಳಿನಾಣ್ಯದ ಕೆಳಗೆ "ಅಪ್ಪಟ ಬೆಳ್ಳಿ ,ಬೆಳ್ಳಿತೆರೆಗೊಂದು ಅಪ್ಪಟ ಚಿತ್ರ" ಎಂದು ಮುದ್ರಿಸಲಾಗಿದೆ. ಲೋಹಗಳಲ್ಲೆ ಬೆಳ್ಳಿ ಅತ್ಯಂತ ಹೊಳಪುಳ್ಳದ್ದು. ಅದೇ ರೀತಿಯ ಹೊಳಪು ತಮ್ಮ ಚಿತ್ರದಲ್ಲೂ ಇರುತ್ತದೆ ಎಂಬ ಸೂಚನೆಯನ್ನು ಗುರುಪ್ರಸಾದ್ ಪರೋಕ್ಷವಾಗಿ ಕೊಟ್ಟಂತಿದೆ.
| "ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು" ಕೃತಿಯೂ ಲೋಕಾರ್ಪಣೆಯಾಗಲಿದೆ | |
ಇದೇ ಸಂದರ್ಭದಲ್ಲಿ ಗುರುಪ್ರಸಾದ್ ಬರೆದಿರುವ "ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು" ಕೃತಿಯೂ ಲೋಕಾರ್ಪಣೆಯಾಗಲಿದೆ. ಪುಸ್ತಕ ಬಿಡುಗಡೆ ಮತ್ತು ಮುಹೂರ್ತ ಒಟ್ಟಿಗೆ ನೆರವೇರುತ್ತಿರುವುದು ಗುರುಪ್ರಸಾದ್ ಸಂತಸವನ್ನು ಹೆಚ್ಚಿಸಿದೆ. ಪುಸ್ತಕವನ್ನು ಅಂಬರೀಷ್ ಅವರು ಬಿಡುಗಡೆ ಮಾಡಲಿದ್ದಾರೆ.
ಚಿತ್ರಕ್ಕೆ ಕ್ಲಾಪ್ ಮಾಡುವವರು ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕ್ಯಾಮೆರಾ ಚಾಲನೆ ಮಾಡಲಿದ್ದಾರೆ. ಈ ಹಿಂದೆ ತಮ್ಮ ಯಶಸ್ವಿ ಚಿತ್ರ 'ಎದ್ದೇಳು ಮಂಜುನಾಥ'ನಿಗೆ ಸಂಗೀತ ನಿರ್ದೇಶಿಸಿದ್ದ ಅನೂಪ್ ಸೀಳಿನ್ ಅವರಿಗೆ ಈ ಬಾರಿಯೂ ಗುರು ಅವಕಾಶ ಕೊಟ್ಟಿರುವುದು ವಿಶೇಷ.


Click it and Unblock the Notifications











