ಜಯಣ್ಣ ಜೇಬಿಗೆ ಅಣ್ಣಾಬಾಂಡ್ ಬಿಕೆಟಿ ಹಕ್ಕುಗಳು
ಪುನೀತ್ ರಾಜ್ಕುಮಾರ್ ಅಭಿನಯದ 'ಪರಮಾತ್ಮ' ಚಿತ್ರವನ್ನು ಜಯಣ್ಣ ನಿರ್ಮಿಸಿದ್ದರು. ಬಹು ನಿರೀಕ್ಷಿತ ಚಿತ್ರವಾಗಿತ್ತದು. ಆದರೂ ಚಿತ್ರ ಆ ಯಶಸ್ಸನ್ನ ನೋಡಲಿಲ್ಲ. ಹಾಗಂತ ಜಯಣ್ಣ ಕೂಡಾ ನಷ್ಟ ಮಾಡಿಕೊಳ್ಳಲಿಲ್ಲ. ಎಲ್ಲರೂ ನಿರೀಕ್ಷಿಸಿದಷ್ಟು 'ಪರಮಾತ್ಮ' ಜನಪ್ರಿಯವಾಗಲಿಲ್ಲ ಅನ್ನೋದು ಮಾತ್ರ ಸತ್ಯ.
ಅದಾದ ಮೇಲೆ ಜಯಣ್ಣ ಈಗ 'ಜಾನೂ' ಚಿತ್ರ ಮುಗಿಸಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರ ಇನ್ನೇನು ತೆರೆ ಕಾಣಲು ಸಜ್ಜಾಗಿ ನಿಂತಿದೆ. ಇದರ ನಡುವೆಯೇ ಅವರು ಸಣ್ಣದೊಂದು ವ್ಯವಹಾರ ಕುದುರಿಸಿಕೊಂಡಿದ್ದಾರೆ. ಅದೇನೆಂದರೆ 'ಅಣ್ಣಾಬಾಂಡ್' ಚಿತ್ರದ ಬಿಕೆಟಿ (ಬೆಂಗಳೂರು, ಕೋಲಾರ ಮತ್ತು ತುಮಕೂರು)ಹಕ್ಕುಗಳನ್ನ ಖರೀದಿಸಿರುವುದು.
ಸಮರ್ಥ ವೆಂಚರ್ಸ್ನ ಪ್ರಸಾದ್ ಈಗೊಂದು ಮೂರು ತಿಂಗಳ ಮೊದಲೇ 'ಅಣ್ಣಾಬಾಂಡ್'ನ ಹಕ್ಕುಗಳನ್ನ ಸಾರಾಸಗಟಾಗಿ ದೊಡ್ಡ ಮೊತ್ತಕ್ಕೆ ಖರೀದಿಸಿಯಾಗಿತ್ತು. ಆದರೆ ಚಿತ್ರ ಬಿಡುಗಡೆಯಲ್ಲಿ ತಮ್ಮ ಪಾಲುದಾರಿಕೆಯೂ ಇರಬೇಕು ಎಂದು ರಾಘಣ್ಣ ಹೇಳಿದ್ದೇ ತಡಾ, ಪ್ರಸಾದ್ ಹಿಂದೆ ಸರಿದರು. ಬಹು ಕೋಟಿ ಖರೀದಿ ಒಪ್ಪಂದ ಮುರಿದು ಬಿತ್ತು.
ಈಗ ವಜ್ರೇಶ್ವರಿ 'ಅಣ್ಣಾಬಾಂಡ್ 'ಚಿತ್ರವನ್ನ ವಿತರಕರಿಗೆ ಪ್ರಾಂತ್ಯವಾರು ಮಾರಾಟ ಮಾಡಿದೆ. ಅದರಲ್ಲಿ ಜಯಣ್ಣರದ್ದು ದೊಡ್ಡ ಖರೀದಿ. ಬಿಕೆಟಿ ಹಕ್ಕನ್ನ ಅವರೇ ಖರೀದಿಸಿದ್ದಾರೆ. ಜೋಡಿ ಪಾಲುದಾರಿಕೆಯಲ್ಲೇ ಚಿತ್ರವನ್ನ ರಾಜ್ಯದಾದ್ಯಂತ ಬಿಡುಗಡೆ ಮಾಡುವ ಪ್ರಪೋಸಲ್ನ್ನ ಜಯಣ್ಣ ಮುಂದೆ ಇಡಲಾಗಿತ್ತಾದರೂ, ಜಯಣ್ಣ ಬಿಕೆಟಿಗಷ್ಟೇ ತಮ್ಮನ್ನು ಸೀಮಿತಗೊಳಿಸಿರಿಕೊಂಡಿರುವುದು ಈಗಿನ ಬೆಳವಣಿಗೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











