ಎಂಧಿರನ್ ಸಂದರ್ಭದಲ್ಲಿ ನವಿಲಾದವರು ಬಿಸಿಬಿಸಿ ಚರ್ಚೆ
ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನ ಮತ್ತು ಆ ಸಂಬಂಧಿತ "ಚಿತ್ರ ವಿಚಾರಸಂಕಿರಣ"ವನ್ನು ಸಂವಾದ ಡಾಟ್ ಕಾಂ "ಸುರಾನ" ಕಾಲೇಜಿನಲ್ಲಿ ಏರ್ಪಡಿಸಿದೆ.
ಮೂವತ್ತೈದು ಸಾವಿರದ ದೃಶ್ಯಾಭಿವ್ಯಕ್ತಿಯನ್ನು ಹಾಸ್ಯಾಸ್ಪದ ಚಟುವಟಿಕೆ ಎನ್ನಬೇಕೆ? ಅಥವ ಕೆಟ್ಟ ವಿಜೃಂಭಣೆಯ, ಅನೈತಿಕ ಸಂಭಾವನೆ/ವೆಚ್ಚದ ವಿರುದ್ಧ ಎತ್ತಿರುವ ಅರ್ಥಪೂರ್ಣ ಪ್ರಶ್ನೆ ಎಂದೆನ್ನಬೇಕೆ? ಈ ಪ್ರಶ್ನೆಗಳನ್ನು ಹೆಚ್ಚು ಮಹತ್ವಪೂರ್ಣ ಚರ್ಚೆಗೆ ಒಡ್ಡುವ ಆಶಯವನ್ನು ಸಂವಾದ ಡಾಟ್ ಕಾಂ ಹೊಂದಿದೆ.
ನ.28ರಂದು ಬೆಳಗ್ಗೆ 11ರಿಂದ 2.30ರವರೆಗೆ ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-4 ಇಲ್ಲಿ ಬಿಸಿ ಬಿಸಿ ಚರ್ಚೆ ನಡೆಯಲಿದೆ. ವಿಚಾರ ಸಂಕಿರಣದ ವಿಷಯ, "ಎಂಧಿರನ್ ಸಂದರ್ಭದಲ್ಲಿ ನವಿಲಾದವರು".
ಯು ಆರ್ ಅನಂತಮೂರ್ತಿ(ಹಿರಿಯ ಚಿಂತಕ, ಸಾಹಿತಿ), ಜಿ ಬಿ ಹರೀಶ್(ಪ್ರಾಧ್ಯಾಪಕರು, ತುಮಕೂರು ವಿ ವಿ, ಬರಹಗಾರರು), ಜಾನ್ ದೇವರಾಜ್ (ಬೀದಿಮಕ್ಕಳು, ಬಾಲಕಾರ್ಮಿಕರ ಪರ ಹೋರಾಟಗಾರರು), ಕೇಸರಿ ಹರವು (ಚಿತ್ರ ನಿರ್ದೇಶಕರು, ಭೂಮಿಗೀತ ಚಿತ್ರ ಖ್ಯಾತಿ, ರಂಗಕರ್ಮಿ), ಡೇವಿಡ್ ಬಾಂಡ್(ಫ್ರೆಂಚ್ ಚಿತ್ರಾಸಕ್ತರು, ಅತಿಥಿ ಪ್ರಾಧ್ಯಾಪಕರು, ಕುವೆಂಪು ವಿ ವಿ), ಶೇಖರಪೂರ್ಣ (ಹಿರಿಯ ಚಿತ್ರ ವಿಮರ್ಶಕರು) ವಿಚಾರಸಂಕಿರಣದಲ್ಲಿ ಮಾತನಾಡಲಿದ್ದಾರೆ.
ವಿಚಾರಸಂಕಿರಣಕ್ಕೆ ಮುಖ್ಯ ಅತಿಥಿಗಳಾಗಿ ಲಹರಿ ವೇಲು (ಲಹರಿ ಆಡಿಯೋ ಕಂಪನಿ ಮಾಲೀಕರು), ನರೇಂದ್ರ ಬಾಬು (ನಿರ್ದೇಶಕರು, ಕಬ್ಬಡ್ಡಿ ಚಿತ್ರ ಖ್ಯಾತಿ), ಗಿರಿರಾಜ್ ಬಿ ಎಂ ಜೊತೆ 'ನವಿಲಾದವರು' ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅರೇಹಳ್ಳಿ ರವಿ ಮೊಬೈಲ್ ಸಂಖ್ಯೆ 99004 39930, ಕಿರಣ್ ಮೊಬೈಲ್ ಸಂಖ್ಯೆ 97317 55966 ಅವರನ್ನು ಸಂಪರ್ಕಿಸಬಹುದು.


Click it and Unblock the Notifications











