ಬೆಳ್ಳಿ ಪರದೆಗೆ ಬರಲಿದೆ ರಘು, ಅನುಷಾ ಪ್ರೇಮ ಪ್ರಕರಣ
ನೈಜ ಪ್ರೇಮ ಪ್ರಕರಣವೊಂದನ್ನು ತೆರೆಗೆ ತರಲಿದ್ದಾರೆ ಕಲಾ ಸಾಮ್ರಾಟ್ ಎಸ್ ನಾರಾಯಣ್. ಚಿತ್ರಕ್ಕೆ ಅವರು 'ನೆನಪಿದೆಯಾ ಓ ಗೆಳತಿ' ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ರಾಜ್ಯದಾದ್ಯಂತ ರಘು ಮತ್ತು ಅನುಷಾ ಪ್ರೇಮ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಈಗ ಇದೇ ಪ್ರಕರಣವನ್ನು ಅವರು ಸಿನಿಮಾ ಮಾಡಲು ಹೊರಟಿದ್ದಾರೆ.
ಅಂದಹಾಗೆ ಈ ಚಿತ್ರಕ್ಕೆ ನಾಯಕ ನಟ ನಾರಾಯಣ್ ಅವರ ಪುತ್ರ ಪಂಕಜ್. ಪ್ರೀತಿಸಿ ಕಣ್ಣು ಕಳೆದುಕೊಂಡ ನತದೃಷ್ಟ ಪಾತ್ರದಲ್ಲಿ ಪಂಕಜ್ ಕಾಣಿಸಲಿದ್ದಾರೆ. ರಘು ಜೀವನದಲ್ಲಿ ನಡೆದ ನೈಜ ಘಟನೆಗಳನ್ನೇ ಇಟ್ಟುಕೊಂಡು ಚಿತ್ರಕಥೆ ಹೆಣೆಯುವುದಾಗಿ ಕಲಾ ಸಾಮ್ರಾಟ್ ತಿಳಿಸಿದ್ದಾರೆ. ರಘು ಗುಣಮುಖರಾದ ಕೂಡಲೆ ಅವರನ್ನು ಸಂಪರ್ಕಿಸಿ ಪೂರ್ಣವಿವರಗಳನ್ನು ಪಡೆಯುತ್ತೇನೆ ಎಂದಿದ್ದಾರೆ ನಾರಾಯಣ್.
ತಮ್ಮ ಚಿತ್ರ ಸಮಾಜದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಬದಲಾಗಿ ಈ ಚಿತ್ರ ಯುವಜನರಿಗೆ ಸಂದೇಶ ನೀಡಲಿದೆ. ಈ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಾರಾಯಣ್ ಭರವಸೆ ನೀಡಿದ್ದಾರೆ. ಸದ್ಯಕ್ಕೆ ನಾರಾಯಣ್ ಘಟನೆಯ ವಿವರಗಳನ್ನು ಕಲೆ ಹಾಕುವಲ್ಲಿ ಮಗ್ನರಾಗಿದ್ದಾರೆ. ಏನಿದು ರಘು ಅನುಷಾ ಪ್ರೇಮ ಪ್ರಕರಣ?


Click it and Unblock the Notifications











