ಸಾಕ್ಷ್ಯಚಿತ್ರಗಳಪಿತಾಮಹ ಎಂವಿ ಕೃಷ್ಣಸ್ವಾಮಿ ನೆನಪು

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಲ್ಲಿ ದುಡಿದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಯಿದ್ದರೂ ಹಲವಾರು ಉತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರೂ ಗಾಂಧಿನಗರ ಸೋ ಕಾಲ್ಡ್ ಸ್ಯಾಂಡಲ್ ವುಡ್ ಗೆ ಈ ಹಿರಿಜೀವಿ ಇದ್ದದ್ದು ಹೋದದ್ದು ಗೊತ್ತೇ ಆಗಿರುವುದಿಲ್ಲ. ಅಷ್ಟೇಕೆ ಎಷ್ಟೋ ಮಾಧ್ಯಮಗಳಲ್ಲಿ ಎಂವಿಕೆ ಎಂದರೆ ಯಾರು ಎಂಬುದು ತಿಳಿದಿದ್ದು ಬಹುಶಃ ಶಾಂತಾರಾಂ ಪ್ರಶಸ್ತಿ ಲಭಿಸಿದ ಮೇಲೆ.
'ಸಾರ್.. ಇನ್ನೊಂದು ಫೋಟೊ 'ಎಂದರೆ' ಸಾಯೋ ವಯಸ್ಸಿನಲ್ಲಿ ಯಾಕಪ್ಪ ಫೋಟೋ' ಎಂದು ಕೈ ಅಡ್ಡ ಹಿಡಿಯುತ್ತಿದ್ದ ಎಂವಿಕೆ, ವಯೋಸಹಜ ದೇಹಾಲಸ್ಯವಿದ್ದರೂ ಸಿನಿಮಾ, ಡಾಕ್ಯುಮೆಂಟರಿ ಬಗ್ಗೆ ಮಾತಿಗೆ ಕೂತರೆ ಹೊತ್ತು ಹೋಗುವುದೇ ಗೊತ್ತಾಗುತ್ತಿರಲಿಲ್ಲ. ಡಿವಿಜಿ ಅವರ ಡಾಕ್ಯುಮೆಂಟರಿ ಮಾಡುವ ಬಗ್ಗೆ ಎಂವಿಕೆ ಅವರಲ್ಲಿ ಸಲಹೆ ಕೇಳಲು ಹೋದಾಗ ಹಾಸಿಗೆಯಲ್ಲಿ ಮಲಗಿದ್ದರು ಎದ್ದು ಕೂತು ಉತ್ಸಾಹದಿಂದ ಮಾತನಾಡಿದ್ದರು.
60 ಹಾಗೂ 70ನೇ ದಶಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟ, ನಿರ್ಮಾಪಕ, ನಿರ್ದೇಶಕರಾಗಿ ಹೆಸರು ಗಳಿಸಿದ್ದರೂ, ಇತ್ತ ಮಕ್ಕಳಿಂದ ದೂರವಾಗಿ, ತನ್ನಲ್ಲಿದ್ದ ಅಪಾರ ಜ್ಞಾನಭಂಡಾರವನ್ನು ಇತರರೆ ಹಂಚುವ ತವಕದಲ್ಲೇ ಕಾಲ ಕಳೆದ ಎಂವಿಕೆ ಶನಿವಾರ ಮಲ್ಲೇಶ್ವರದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಯಲಹಂಕದ ಚಿತಾಗಾರದಲ್ಲಿ ಆಪ್ತರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ಕೂಡಾ ಶನಿವಾರ ಸಂಜೆಯೇ ಮುಗಿದು ಹೋಗಿದೆ.
ಎಂವಿಕೆ ಬಗ್ಗೆ ಸಂಕ್ಷಿಪ್ತ ವಿವರ: ಮೇಲುಕೋಟೆ ಸಮೀಪದ ಬೆಳಕವಾಡಿಯಲ್ಲಿ ಜನನ. ಮೈಸೂರಿನ ಮಹರಾಜ ಕಾಲೇಜಿನಲ್ಲಿ ವ್ಯಾಸಂಗ. 1949 ರಲ್ಲಿ ಭಾರತಿ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಎಂವಿಕೆ ಪ್ರವೇಶಿಸಿದರು. ವೀಣಾವಾದಕ ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ನೀಡಿದ ಸುಬ್ಬಾ ಶಾಸ್ತ್ರಿ(1966) ಹಾಗೂ ಪಾಪ ಪುಣ್ಯ(1921) ಅವರು ನಿರ್ದೇಶಿಸಿದ ಚಿತ್ರಗಳು. ಇಟಲಿಯ ಖ್ಯಾತ ನಿರ್ದೇಶಕ ರಾಬರ್ಟ್ ರೊಸ್ಸೆಲ್ಲಿಲಿನಿ ಜೊತೆ ದುಡಿದ ಅನುಭವ ಹೊಂದಿದ್ದರು. ಸರ್ ಎಂ. ವಿಶ್ವೇಶ್ವರಯ್ಯ, ದೊರೆಸ್ವಾಮಿ ಅಯ್ಯಂಗಾರ್ , ಕುದುರೆಮುಖ ಕುರಿತಾದ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ.
ಅಪಾರ ಅನುಭವ :ಓವರ್ ಸೀಸ್ ಫಿಲ್ಮಂ ಕ್ಲಬ್ಲ್ ,ಭಾರತದ ಚಲನಚಿತ್ರ ಅಭಿವೃದ್ಧಿ ನಿಗಮ, ಸೆನ್ಸಾರ್ ಮಂಡಳಿ, ಚಲನಚಿತ್ರೋತ್ಸವ ನಿರ್ದೇಶನಾಲಯ, ಫಿಲ್ಮಂ ಹಾಗೂ ಟಿವಿ ಇನ್ಸ್ ಸ್ಟಿಟ್ಯೂಟ್.. ಇತ್ಯಾದಿ ಅನೇಕಾನಕ ಸಂಸ್ಥೆಗಳಲ್ಲಿ ದುಡಿದ ಅನುಭವ ಅವರಲ್ಲಿತ್ತು. ಸಿನಿಮಾ ಕಲೆ ಬಗ್ಗೆ ಅಧ್ಯಯನ ಮಾಡಲು 40 ರ ದಶಕದಲ್ಲೇ ಮೈಸೂರಿನಿಂದ ಪ್ಯಾರೀಸ್,ಲಂಡನ್ ಹಾಗೂ ರೋಮ್ ಗಳಲ್ಲಿ ಅಡ್ಡಾಡಿ ಇಂಗ್ರೆಡ್ ಬರ್ಗ್ ಮನ್, ರೊಬೊರ್ಟೊ ರೊಸ್ಸೆಲ್ಲಿನಿಯಂತಹ ದಿಗ್ಗಜರ ಸಂಪರ್ಕ ಸಾಧಿಸಿದ್ದರು. ಸಾಕ್ಷ್ಮ್ಯ ಚಿತ್ರ ಲೋಕದ ಸಾಧಕರಿಗೆ ನೀಡುವ 'ಎಜ್ರಾ ಮೀರ್ ' ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ವಿ. ಶಾಂತಾರಾಂ ಪ್ರಶಸ್ತಿ ಪಡೆದಿದ್ದರು.


Click it and Unblock the Notifications











