ನಾಲ್ಕೇ ನಾಲ್ಕು : ಸೀತಾರಾಂ ಜೊತೆ ಮಾತುಕತೆ!
'ಮಾಯಾಮೃಗ" ಎಂದ ತಕ್ಷಣ ನೆನಪಾಗುವುದು ಟಿ.ಎನ್.ಸೀತಾರಾಂ. ಮೌನಕ್ಕಿಂತ ಮಾತುಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡ ಅವರು ತಮ್ಮ ಟೀವಿ ಸೀರಿಯಲ್ಗಳ ಮೂಲಕ ಮನೆಮನೆ ತಲುಪಿದರು. ಕಿರುತೆರೆಯ ಅನುಭವದಿಂದಲೇ 'ಮತದಾನ"ದಂಥ ಸಿನಿಮಾ ಮಾಡಿದರು. ವರ್ತಮಾನದ ತೀರದಿಂದ ಹೆಕ್ಕಿದ್ದನ್ನೇ ಪೋಣಿಸಿ ಅದಕ್ಕೆ ಕಲೆಯ ಕಾಲಾತೀತ ಗುಣ ನೀಡಿದ ಸೀತಾರಾಂರ ಅನುಭವದ ಮಾತುಗಳಿಗೂ ಇಲ್ಲಿ ಪ್ರಶ್ನೆಗಳಿವೆ.
'ನಮ್ಮೊಳಗೊಬ್ಬ ನಾಜೂಕಯ್ಯ" ನಾಟಕ ಬರೆದಾಗಿನ ನಿಮ್ಮ ಬರವಣಿಗೆಯ ದಿಕ್ಕು-ಯೋಚನೆ ಹೇಗಿತ್ತು ?
ನಿತ್ಯ ಜೀವನದಿಂದ ಹೊಮ್ಮಿದ ವಿನೋದ, ಮಧ್ಯಮ ವರ್ಗದ ಮನಸ್ಸಿನ ಪುಡಿಗಾಸು ರಾಜಕೀಯ ಇವು ಆ ಸಂದರ್ಭದಲ್ಲಿ ನನ್ನ ನಾಟಕ- ಬರವಣಿಗೆಯ ಮುಖ್ಯ ಧಾತುವಾಗಿದ್ದವು.
ನಿಮ್ಮ ಸಿನಿಮಾ- ಧಾರಾವಾಹೀಲಿ ಪ್ರತಿಯಾಂದು ದೃಶ್ಯವೂ ಅಚ್ಚುಕಟ್ಟಾಗಿರ್ತದಲ್ಲ . ಚಿತ್ರಕಥೆಯ ಹಾಳೆಗಳ ಮೇಲೇ ಈ ಅಚ್ಚುಕಟ್ಟು ಆರಂಭವಾಗ್ತದಾ?
ಇಲ್ಲಪ್ಪಾ ಇಲ್ಲ . ನನ್ನ ಚಿತ್ರಕಥೆಯ ಪುಟ ಮಹಾ ಅವ್ಯವಸ್ಥೆಯಿಂದ ಕೂಡಿರ್ತದೆ. ಅದಕ್ಕೆ ಶಿಸ್ತು ಬರೋದು ಶೂಟಿಂಗ್ ಶುರು ಆದಾಗಲೇ.
ಟೀವಿಗೂ- ಸಿನಿಮಾಗೂ ನಿಮ್ಮ ದೃಷ್ಟೀಲಿ ಇರೋ ವ್ಯತ್ಯಾಸ ಏನು?
ಸಿನಿಮಾ- ಟೀವಿಗಿಂತ ಭಿನ್ನ . ಅಂದರೆ ಟಿವಿಯ ಮೂರು ಪುಟದ ಮಾತು, ಸಿನಿಮಾದಲ್ಲಿ ಒಂದೇ ಪುಟದಲ್ಲಿ ಮುಗೀಬೇಕು. ಟೀವಿಯ ಭಾಷೆ ನಿರೂಪಣಾತ್ಮಕ. ಆದರೆ ಸಿನಿಮಾದ ಭಾಷೆ ನಿಖರ.
ನೀವ್ಯಾಕೆ ಬೇರೆ ನಿರ್ದೇಶಕರಿಗೆ ಕಥೆ ಬರೀಬಾರ್ದು ?
ನನ್ನ ಕಥೇನ ಬೇರೆಯವರು, ಬೇರೆಯವರ ಕಥೇನ ನಾನು ನಿರ್ದೇಶಿಸೋದು ನಂಗ್ಯಾಕೋ ಸರಿ ಬರಲ್ಲ.
(ವಿಜಯ ಕರ್ನಾಟಕ)
ವಾರ್ತಾ ಸಂಚಯ


Click it and Unblock the Notifications