Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶನ ಹಬ್ಬಕ್ಕೆ ರವಿ- ಹಂಸ್ ಕಡುಬು
ರಾಕ್ಲೈನ್ ಸ್ಟುಡಿಯೋದಲ್ಲಿ ತಲೆಯೆತ್ತಿ ನಿಂತಿರುವ ಅದ್ಧೂರಿ ಬಂಗಲೆಗಳನ್ನು ನೋಡಿದರೆ, ನಾನೀಗ ಧೀರನಲ್ಲ ಅಂತ ವೆಂಕಟೇಶ್ ಹೇಳಿಕೊಳ್ಳುತ್ತಿರುವುದು ಸುಳ್ಳೆನೆಸುತ್ತೆ. ರವಿಚಂದ್ರನ್- ಹಂಸಲೇಖ ನಡುವೆ ಮುರಿದಿದ್ದ ಸಂಬಂಧಕ್ಕೆ ಕೊಂಡಿಯಾದ ಖುಷಿಯಲ್ಲಿ ರಾಕ್ ಉತ್ಸಾಹ ಇಮ್ಮಡಿಯಾಗಿದೆ.
ರವಿ- ಹಂಸ್ ಒಂದಾದ ಸಂತೋಷದಲ್ಲಿ 'ಒಂದಾಗೋಣ ಬಾ" ಚಿತ್ರೀಕರಣ ರಾಜಧಾನಿ ಎಕ್ಸ್ಪ್ರೆಸ್ನಷ್ಟು ಜೋರಾಗಿದೆ. ಸಿನಿಮಾ ಕೂಡ 'ಡಕೋಟ ಎಕ್ಸ್ಪ್ರೆಸ್" ಥರ ಓಡುತ್ತೆ ನೋಡಿ ಅಂತ ನಗುತ್ತಾರೆ ರವಿ. ರವಿ- ಹಂಸ್ ಕಾಂಬಿನೇಷನ್ನಿನ ಹಳೆಯ ಚಿತ್ರಗಳಲ್ಲಿದ್ದ ಸೆಟ್ಗಳ ಸೆಳಕು ಈಗ ಮರು ಕಳಿಸಿದೆ. ನಿರ್ಮಾಣದ ಶ್ರೀಮಂತಿಕೆಯಲ್ಲಿ ರಾಕ್ಲೈನ್ ಕಿಂಚಿತ್ತೂ ಜುಗ್ಗರಾಗಿಲ್ಲ. ದುಡ್ಡು ಕಾಸು ವ್ಯವಹಾರ ನೋಡಿಕೊಳ್ಳುತ್ತಿರುವ ಕೆ.ಪಿ.ಮಂಜಯ್ಯಕೂಡ 'ಒಂದಾಗೋಣ.." ತಂಡದೊಟ್ಟಿಗೆ ಒಂದಾಗಿ ಕೊಡುಗೈ ಪ್ರಭುವಂತೆ ಕಾಣುತ್ತಿದ್ದಾರೆ.
ಕಬ್ಬಿಣ ಚೆನ್ನಾಗಿ ಕಾದಿರುವಾಗ ಬೇಕಾದ ಆಕಾರಕ್ಕೆ ತಂದುಕೊಳ್ಳದಿದ್ದರೆ ಕಳಕೊಳ್ಳೋನು ತಾನೇ ಎಂಬ ಜಾಯಮಾನದ ರಾಕ್ಲೈನ್ 'ಒಂದಾಗೋಣ ಬಾ" ಮುಗಿಸುವ ಆತುರದಲ್ಲಿದ್ದಾರೆ. ಇದು ಗಣೇಶನ ಹಬ್ಬಕ್ಕೆ ಪ್ರೇಕ್ಷಕರಿಗೆ ನನ್ನ ಗಿಫ್ಟ್ ಎಂದಷ್ಟೇ ಹೇಳುವ ರಾಕ್ಲೈನ್ ಸೆಟ್ಟಿನಲ್ಲಿ ಒಂದಾಗಿ ಹೋಗುತ್ತಾರೆ. ಒಂದಾದವರ ಖುಷಿಯ ನಡುವೆ ಹೆಚ್ಚು ಮಾತಾಡಲು ಅವರಿಗೆ ಪುರುಸೊತ್ತಿಲ್ಲ.
ತೆಲುಗಿನಲ್ಲಿ ಪ್ರಶಸ್ತಿಗಳನ್ನು ದೋಚಿದ 'ಕಲಿಸುಂದಾಂ ರಾ" ಚಿತ್ರದ ರೀಮೇಕು 'ಒಂದಾಗೋಣ ಬಾ". ತೆಲುಗಿನ ಮೂಲ ನಿರ್ದೇಶಕ ಉದಯ ಶಂಕರ್ ಅವರಿಗೇ ಕನ್ನಡ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಲಾಗಿದೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕತೆಯನ್ನು ಹೊಂದಿಸಿಕೊಂಡು, ಅವರೇ ಚಿತ್ರಕತೆಗೆ ತಿದ್ದುಪಡಿ ತಂದಿದ್ದಾರೆ.
ಕೋಟಗಾನಹಳ್ಳಿ ರಾಮಣ್ಣ ಸಂಭಾಷಣೆ ಬರೆದಿದ್ದು, ಇಸ್ಮಾಯಿಲ್ ಕಲೆ ಕುಸುರಿ ಕೆಲಸ ಮಾಡಿದ್ದಾರೆ. ಉದಯ ಶಂಕರ್ ಸಹಾಯಕ್ಕೆ ಸೋಮರಾಜ್- ಸಾಹುರಾಜ್ ನಿಂತಿದ್ದಾರೆ. ಪಂಬಲ್ ರವಿ ಡುಶುಂ ಡುಶುಂ ಹೇಳಿಕೊಡಲಿದ್ದು, ಕೆ.ಪಿ.ಮಂಜಯ್ಯ ನಿರ್ಮಾಣ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.
ಹಂಸ್-ರವಿಯ ಕೊಂಡಿ ಕಳಚುವ ಮುಂಚೆ ತೆರೆಕಂಡ ಕೊನೆ ಚಿತ್ರ 'ಪ್ರೀತ್ಸೋಣ ಬಾ"ದ ಯಶಸ್ವಿ ನಾಯಕಿ ಶಿಲ್ಪ ಶೆಟ್ಟಿ ಚಿತ್ರದ ಸೆಳಕು. ತೆಲುಗು ಗಂಧದ ಹಿರೀಕ ಸೋಮಯಾಜುಲು, ಕನ್ನಡ ಚಿತ್ರಗಳಿಂದ ಅಲ್ಪ ವಿರಾಮ ಪಡೆದಿದ್ದ ಚರಣ್ರಾಜ್, ಕೆ.ಆರ್.ವಿಜಯಾ, ಹೆಸರಿಗೆ ತಕ್ಕ ದೊಡ್ಡಣ್ಣ , ಶಾಶ್ವತ ಸಿಎಂ ಮುಖ್ಯಮಂತ್ರಿ ಚಂದ್ರು, ಬೋರು ಹೊಡೆಸಿದರೂ ಆಗಾಗ ನೆನಪಾಗುವ ಶಿವರಾಂ, ಅಪರೂಪ ಎಂಬಂತೆ ಸುಂದರ ರಾಜ್ ದಂಪತಿಗಳು, ಧಾರಾವಾಹಿಯಲ್ಲಿ ಕಳೆದು ಹೋಗುತ್ತಿದ್ದ ಪವಿತ್ರಾ ಲೋಕೇಶ್, ನಾಯಕಿ ಸ್ಥಾನದಿಂದ ನಿವೃತ್ತರಾಗಿರುವ ತಾರಾ ಹಾಗೂ ವನಿತಾವಾಸು, ಹೊನ್ನಪ್ಪ ಭಾಗವತರ್ ಕೂಸು ಭರತ್ ಭಾಗವತರ್ ಮೊದಲಾದವರು 'ಒಂದಾಗೋಣ ಬಾ" ಅಂತಿದಾರೆ.
ಗಣೇಶನ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗೋದು ಗ್ಯಾರಂಟಿ ಅಂತೆ.