ರಕ್ಷಿತಾ ಜೊತೆ ನಿಶ್ಚಿತಾರ್ಥ ಆಗಿದ್ದು ನಿಜ - ಪ್ರೇಮ್
‘ಜೋಗಿ’ ಖ್ಯಾತಿಯ ನಿರ್ದೇಶಕ ಪ್ರೇಮ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಯಾಕೆ ಅಂದ್ರೆ? -ಸಚಿನ್, ರಾಬಿನ್ ಉತ್ತಪ್ಪ, ಟಿ.ಎನ್.ಸೀತಾರಾಂ ಅವರಂತೆಯೇ ಸರ್ಪದೋಷ ಕಳೆದುಕೊಳ್ಳುವ ಉದ್ದೇಶದಿಂದ! ಅವರೊಂದಿಗೆ ಅವರ ಭಾವಿ ಪತ್ನಿ(?) ರಕ್ಷಿತಾ ಸಹ ಇದ್ದರು.
ಸದ್ದಿಲ್ಲದೇ, ನಾಗದೋಷ ನಿವಾರಣೆಗಾಗಿ ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಪೂಜಾ ವಿಧಿಗಳನ್ನು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರೇಮ್ ಪೂರೈಸಿದರು. ಆದರೆ ಪ್ರೇಮ್ರ ಕಾಡಿದ ನಾಗಿಣಿ ಯಾರೋ ಪತ್ತೆ ಆಗಲಿಲ್ಲ. ಅವರು ಬಾಯಿ ಬಿಡಲಿಲ್ಲ.
ಈ ಸಂದರ್ಭದಲ್ಲಿ ತಮ್ಮ ಮತ್ತು ರಕ್ಷಿತಾ ನಡುವಿನ ಪಿಸುಗುಸುಗಳಿಗೆ ಪ್ರೇಮ್ ತೆರೆ ಎಳೆದರು. ಸದ್ಯಕ್ಕೆ ಅಷ್ಟೇ ಸಮಾಧಾನ! ‘ನಮ್ಮ ನಿಶ್ಚಿತಾರ್ಥ ಆಗಿರುವುದು ನಿಜ. ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ’ ಅಂತ ಪ್ರೇಮ್ ಹೇಳಿದ ಕೂಡಲೇ, ರಕ್ಷಿತಾ ಮೇಡಂ ಮುಖ ನಾಚಿಕೆಯಿಂದ ಕೆಂಪಾಯಿತು. ಆದರೂ ದೇವರಸನ್ನಿಧಿಯಲ್ಲಿ ಪತ್ರಕರ್ತರು, ಇಂತಹ ಪ್ರಶ್ನೆಗಳನ್ನೆಲ್ಲ ಕೇಳಬಾರದು ಎಂದು ಅವರು ತಾಕೀತು ಮಾಡಿದರು.
ತಮ್ಮ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ ಎಂದು ಪ್ರೇಮ್ ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ, ಕಾದು ನೋಡಿ ಎಂದು ಸುಮ್ಮನಾದರು. ರಕ್ಷಿತಾ ಏನಾದರೂ ಚಿತ್ರದಲ್ಲಿ ಅಭಿನಯಸಬಹುದಾ ಎಂಬ ಊಹೆಯನ್ನು ಸುದ್ದಿಗಾರರು ತೆರೆದಿಟ್ಟರು. ಪ್ರೇಮ್ ನಿರಾಕರಿಸಲಿಲ್ಲ. ಹಾಗೆಂದು ಒಪ್ಪಲೂ ಇಲ್ಲ!
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications