ಜಯಪ್ರದ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ
ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುತ್ತಿದ್ದ ದಕ್ಷಿಣ ಭಾರತ ಸುಂದರಿ ಜಯಪ್ರದ ಈಗೇನು ಮಾಡ್ತಿದಾರೆ?
ರಾಜ್ಯಸಭೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಕುಮಾರ್ ಅಪಹರಣವಾದಾಗ ತಾವೇ ಹೋಗಿ ಅಣ್ಣಾವ್ರನ್ನ ಬಿಡಿಸಿ ತರುವುದಾಗಿ ಹೇಳುತ್ತಾ ಕೆಮೆರಾಗೆ ಪೋಸು ಕೊಟ್ಟ ನಂತರ ಕೆಮೆರಾ ಕಣ್ಣಿಂದ ಅವರು ದೂರ ಬಹು ದೂರ ಸಾಗಿದ್ದರು. ಅಣ್ಣಾವ್ರು ವೀರಪ್ಪನ್ ಸೆರೆಯಲ್ಲಿದ್ದಾಗಲೇ ವಿದೇಶೀ ಪ್ರವಾಸಕ್ಕೂ ಹೋಗಿ ಬಂದರು. ಈಗ ಅವರು ದೀರ್ಘಕಾಲದ ನಂತರ ಮತ್ತೆ ಬಣ್ಣ ಹಚ್ಚಲಿದ್ದಾರೆ.
ಒಂದು ವೇಳೆ ಅಣ್ಣಾವ್ರ ಭಕ್ತ ಅಂಬರೀಶ ಸೆಟ್ಟೇರಿದ್ದಿದ್ದರೆ ಜಯಪ್ರದ ಅದರ ನಾಯಕಿಯಾಗುವ ಸಾಧ್ಯತೆ ನಿಚ್ಚಳವಾಗಿತ್ತು. ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಜಯಪ್ರದಾಗೆ ಅವಕಾಶವಿಲ್ಲ. ಇನ್ನು ತಮಿಳು, ತೆಲುಗು ಸಿನಿಮಾಗಳಲ್ಲಿ ಅಮ್ಮನ ಪಾತ್ರಕ್ಕೆ ನಲವತ್ತರ ಆಸುಪಾಸಿನಲ್ಲಿರುವ ನಟಿಯರಲ್ಲೇ ಪೋಟಿ ಶುರುವಾಗುವ ಆತಂಕವಿದೆ. ಹೀಗಾಗಿ ಜಯಪ್ರದಾಗೆ ಅಲ್ಲೆಲ್ಲೂ ಛಾನ್ಸ್ ಇಲ್ಲ.
ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಜಯಪ್ರದ ಮತ್ತೆ ಬಣ್ಣ ಹಚ್ಚುತ್ತಿರುವುದು ಅವರಿಗೆ ಖುಲಾಯಿಸಿದ ಅದೃಷ್ಟವೇ ಸರಿ. ಅಂದಹಾಗೆ, ಜಯಪ್ರದ ನಟಿಸುತ್ತಿರುವುದು ಮರಾಠಿ ಚಿತ್ರದಲ್ಲಿ. ಚಿತ್ರದ ಹೆಸರು ಆಧಾರ್.(ಏಜೆನ್ಸೀಸ್)


Click it and Unblock the Notifications