ಮುನ್ನುಡಿ ನಂತರದ ಮ್ಯಾಜಿಕ್, ಒಲಿದೀತೆ ಹ್ಯಾಟ್ರಿಕ್ ?
ಒಂದೆಡೆ 'ದ್ವೀಪ"ದ ಸುವರ್ಣ ಸಂಭ್ರಮ. ಗಿರೀಶ್ ಕಾಸರವಳ್ಳಿ-ಸೌಂದರ್ಯ-ಎಚ್.ಎಂ.ರಾಮಚಂದ್ರ ಅವರ ಚಿನ್ನದ ನಗೆ ! ಇನ್ನೊಂದೆಡೆ ಪಿ.ಶೇಷಾದ್ರಿ ಅವರ ಮೊಗದಲ್ಲಿ ಮುಗುಳ್ನಗೆ !
ಶೇಷಾದ್ರಿ ಅಂದರೆ ಥಟ್ಟನೆ ನೆನಪಾಗಲಿಕ್ಕಿಲ್ಲಿ ; 'ಮುನ್ನುಡಿ" ಶೇಷಾದ್ರಿ ಎಂದರೆ ಮುಖ ಕಣ್ಣೆದುರು ಸೆಳೆಯುತ್ತದೆ. ಬ್ಯಾರಿ ಜನಾಂಗದ ಹೆಣ್ಣುಗಳ ದುರಂತದ ಕಥೆಯನ್ನು ಸಿನಿಮಾ ಆಗಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಶೇಷಾದ್ರಿ ಅವರ ಯಶಸ್ಸಿನ ಕಿರೀಟಕ್ಕೆ ಈಗ ಇನ್ನೊಂದು ಗರಿ.
ಪಿ.ಶೇಷಾದ್ರಿ ಅವರ 'ಅತಿಥಿ" ಸಿನಿಮಾಕ್ಕೆ ಈ ಬಾರಿಯ ಅತ್ಯುತ್ತಮ ಪ್ರಾದೇಶಿಕ ಚಿತ್ರವೆನ್ನುವ ಮನ್ನಣೆ.
ಶೇಷಾದ್ರಿ ಅವರು ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗುತ್ತಿರುವುದು ಇದು ಎರಡನೇ ಸಲ. ಅವರ ಮೊದಲ ಚಿತ್ರ 'ಮುನ್ನುಡಿ" ಸಾಮಾಜಿಕ ಸಮಸ್ಯೆ ಕುರಿತ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿತ್ತು . 'ಅತಿಥಿ" ಅವರ ಎರಡನೇ ಚಿತ್ರ. ಎರಡೂ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಶೇಷಾದ್ರಿ ಹ್ಯಾಟ್ರಿಕ್ ಭರವಸೆ ಮೂಡಿಸಿದ್ದಾರೆ.
ಭಯೋತ್ಪಾದಕನೊಬ್ಬನ ನೆರಳಿನಲ್ಲಿ ಕೆಲವು ಮುಗ್ಧ ಮನಸ್ಸುಗಳು ಅನುಭವಿಸುವ ತವಕ ತಲ್ಲಣಗಳ ಕಥೆಯೇ- 'ಅತಿಥಿ"! ಇಡೀ ವಿಶ್ವವೇ ಭಯೋತ್ಪಾದನೆಯ ತೆಕ್ಕೆಯಲ್ಲಿ ಬೇಯುತ್ತಿರುವಾಗ ಶೇಷಾದ್ರಿ ಅವರ ಸಿನಿಮಾ ವಿಶೇಷ ಮಹತ್ವ ಪಡೆದಿದೆ. ಪ್ರಕಾಶ್ ರೈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶೇಷಾದ್ರಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲೋಸುಗ ಕೇವಲ ಒಂದು ರುಪಾಯಿ ಸಂಭಾವನೆಗೆ ರೈ ನಟಿಸಿದ್ದರು. ಶೇಷಾದ್ರಿ ವಿಶ್ವಾಸ ಉಳಿಸಿಕೊಂಡಿದ್ದಾರೆ. ಮತ್ತೆ ಮಹತ್ತನ್ನು ಸಾಧಿಸಿದ್ದಾರೆ.ಮುಂದಿನ ಬಾರಿ ಶೇಷಾದ್ರಿಗೆ ಸ್ವರ್ಣ ಕಮಲ ಕೈಗೆಟುಕಲಿ !(ಇನ್ಫೋ ವಾರ್ತೆ)ವಾರ್ತಾ ಸಂಚಯ


Click it and Unblock the Notifications