‘ ಗಿರೀಶ್ ಗರಡಿಯಲ್ಲಿ ನಾನು ಕಲಿತದ್ದು ಸಾಕಷ್ಟು’
ಸಂತೋಷದಲ್ಲಿ ನನಗೆ ಮಾತೇ ಹೊರಡುತ್ತಿಲ್ಲ. ಚೊಚ್ಚಲ ಚಿತ್ರ ನಿರ್ಮಾಪಕಿಗೆ 'ಸ್ವರ್ಣ ಕಮಲ"ಕ್ಕಿಂತ ಇನ್ನೇನು ಬೇಕು ಹೇಳಿ?
- ಪ್ರಶಸ್ತಿ ಸುದ್ದಿ ಗೊತ್ತಾದ ಕ್ಷಣದಲ್ಲಿ ಸೌಂದರ್ಯ ಅವರ ಮೊದಲ ಪ್ರತಿಕ್ರಿಯೆಯಿದು. ಸಂತೋಷದ ತುತ್ತ ತುದಿಯಲ್ಲಿದ್ದ ಸೌಂದರ್ಯ ಮುಖದಲ್ಲಿ ಸಾರ್ಥಕ ನಗೆಯಿತ್ತು. ಸ್ವರ್ಣ ಕಮಲದ ಕಳೆಯಿತ್ತು. ತಮ್ಮ ನಿರ್ಮಾಣದ ಮೊದಲ ಚಿತ್ರ 'ದ್ವೀಪ"ಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಸಂದ ಖುಷಿಯನ್ನು ಖಾಸಗಿ ಟಿವಿ ಚಾನೆಲ್ಲೊಂದರ ಜೊತೆ ಅವರು ಹಂಚಿಕೊಂಡರು...
'ಬಹಳ ವರ್ಷಗಳಿಂದ ನಾನು ಕನ್ನಡ ಸಿನಿಮಾ ಮಾಡಬೇಕೆಂದು ಕೊಂಡಿದ್ದೆ. ಮಾಮೂಲು ಸಿನಿಮಾ ನಿರ್ಮಾಣ ಮಾಡುವುದು ಇಷ್ಟವಿರಲಿಲ್ಲ. ಏನಾದರೂ ಹೊಸದನ್ನು ಮಾಡುವ ತುಡಿತ ಇತ್ತು. ಗಿರೀಶ್ ಕಾಸರವಳ್ಳಿ ರೈಟ್ ಅನಿಸಿತು. ಅವರ ಸ್ಕಿೃಪ್ಟ್ ನೋಡಿಯೇ ನಾನು 'ದ್ವೀಪ"ಕ್ಕೆ ಹಣ ಹಾಕಲು ತೀರ್ಮಾನಿಸಿಬಿಟ್ಟೆ.
ಗಿರೀಶ್ ಅವರ ಜೊತೆ ಕೆಲಸ ಮಾಡೋದೇ ಅಪರೂಪದ ಅನುಭವ. ಅವರು ತಣ್ಣಗಿನ ಮನುಷ್ಯ. ಯಾರಿಂದ ಏನು ತಗೋಬೇಕು ಅನ್ನೋದು ಅವರಿಗೆ ಕರಗತ. ನಾನು ಎಷ್ಟೆಲ್ಲಾ ಚಿತ್ರಗಳಲ್ಲಿ ನಟಿಸಿದ್ದರೂ, ಅವರ ಗರಡಿಯಲ್ಲಿ ಕಲಿತದ್ದು ಸಾಕಷ್ಟು".
ಆಸ್ಕರ್ಗೆ ನಾಮಿನೇಟ್ ಆಗಿದ್ದ ಲಗಾನ್ನಂಥಾ ಚಿತ್ರವನ್ನೂ ಮೀರಿಸಿದಿರಲ್ಲಾ ಎಂಬ ಪ್ರಶ್ನೆಗೆ, 'ಲಗಾನ್ ಚಿತ್ರ ನನಗೂ ಮೆಚ್ಚು. ಆ ಚಿತ್ರದ ತಂಡಕ್ಕೆ ನನ್ನ ಅಭಿನಂದನೆಗಳು" ಎಂದು ಮುಗುಮ್ಮಾಗಿ ಉತ್ತರ ಕೊಟ್ಟ ಸೌಂದರ್ಯ ಮಂದಹಾಸ ಬೀರಿದರು. ಅಂದಹಾಗೆ, ಸೌಂದರ್ಯ ತಮ್ಮ ಸಂತೋಷದ ಶಿಖರದ ಸಂಭ್ರಮವನ್ನು ಅನುಭವಿಸುತ್ತಿರುವುದು ಬೆಂಗಳೂರಲ್ಲಿ.
(ಇನ್ಫೋ ವಾರ್ತೆ)


Click it and Unblock the Notifications











