ಈ ಧಾರಾವಾಹಿ ಯಾವ ಟೀವಿಗೆ ಒಲಿಯುವುದೊ ?
ಇದು ಸಿಂಹಪ್ರಿಯ ವಿಷ್ಣುವರ್ಧನ್ ಅವರ ಹೊಸ ಸಿನಿಮಾದ ಹೆಸರಲ್ಲ ; ಕಿರುತೆರೆಯ ಧಾರಾವಾಹಿಯ ಹೆಸರು. ಆದರೆ, 'ಸಿಂಹ ಹೆಜ್ಜೆ"ಗೂ ವಿಷ್ಣುವರ್ಧನ್ ಅವರಿಗೂ ಸಂಬಂಧವಿದೆ. 'ಸಿಂಹ ಹೆಜ್ಜೆ" ಧಾರಾವಾಹಿಯ ಕಥೆ ವಿಷ್ಣುವರ್ಧನ್ ಅವರ ಜೀವನ ಕಥೆ! ಅರ್ಥಾತ್ ಜೀವನ ಚರಿತ್ರೆ.
'ಸಿಂಹ ಹೆಜ್ಜೆ"ಯ ಪರಿಕಲ್ಪನೆ ಹಾಗೂ ನಿರ್ದೇಶನ ಎಸ್.ಶಿವಕುಮಾರ್ ಅವರದ್ದು. ಮೋನಿಷಾ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀನಿವಾಸರಾವ್ ಶಿಂಧೆ ಹಾಗೂ ಎಸ್.ಎಂ.ಬಾಬು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ಜೀವನ ಚರಿತ್ರೆ ಧಾರಾವಾಹಿಯ ಚಿತ್ರೀಕರಣದ ಮುಹೂರ್ತ ಇತ್ತೀಚೆಗಷ್ಟೇ ಪ್ರಾರಂಭವಾಯಿತು. ವಿಷ್ಣು ಚಡ್ಡಿ ದೋಸ್ತು ಹಾಗೂ ಮಂಡ್ಯ ಸಂಸದ ಅಂಬರೀಷ್ ಸೀರಿಯಲ್ನ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು. ಐವತ್ತು ದಿನಗಳನ್ನು ಪೂರೈಸಿ ಇನ್ನೂ ಘರ್ಜಿಸುತ್ತಿರುವ 'ಸಿಂಹಾದ್ರಿಯ ಸಿಂಹ" ಚಿತ್ರದ ನಿರ್ಮಾಪಕ ಹಾಗೂ ವಿಷ್ಣು ಭಕ್ತ ಬಿ.ವಿಜಯಕುಮಾರ್ ಜ್ಯೋತಿ ಬೆಳಗಿದರು.
ಯಥಾಪ್ರಕಾರ ವಿಷ್ಣು ಗುಣಗಾನ ಮಾಡಿದ ಅಂಬರೀಷ್ ಧಾರಾವಾಹಿಗೆ ಶುಭ ಹಾರೈಸಿದರು. ವಿಷ್ಣು ಸೇನಾ ಸಮಿತಿ ಮುಖಂಡ ಪ್ರಸನ್ನಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.ಅಂದಹಾಗೆ, ವಿಷ್ಣುವರ್ಧನ್ ಅವರ ಅಪ್ಪಣೆ ಪಡೆದು ಈ ಧಾರಾವಾಹಿಯನ್ನು ನಿರ್ಮಿಸಲಾಗುತ್ತಿದೆಯಂತೆ!


Click it and Unblock the Notifications