‘ಇದೇನಾ ಆದರ್ಶ, ಎತ್ತ ಸಾಗುತಿಹುದು ದೇಶ’
ರಾಮನ ಆದರ್ಶವನ್ನಿಟ್ಟುಕೊಂಡಿರುವ ದೇಶ ನಮ್ಮದು. ಆದರೆ ಈ ಆಧುನಿಕ ದಿನಗಳಲ್ಲಿ ಮಕ್ಕಳು ಹೆತ್ತವರನ್ನು ಧಿಕ್ಕರಿಸಿ ನಡೀತಿದ್ದಾರೆ. ಭಾರತದಲ್ಲೇ ಹಿರಿಯ ನಾಗರಿಕರಿಗೆ ದುಸ್ಥಿತಿ ಬಂದಿರುವುದು ತೀರಾ ವಿಷಾದನೀಯ... ಅಂತ ಬೇಜಾರು ಮಾಡಿಕೊಂಡವರು ಖ್ಯಾತ ಹಿನ್ನೆಲೆ ಗಾಯಕಿ, ಖಂಬಕ್ತಿಷ್ಕ್.. ಹಾಡಿನಿಂದ ಕಾಲೇಜು ಹುಡುಗರ ಹೃದಯ ಗೆದ್ದಿರುವ ಆಶಾ ಭೋಸ್ಲೆ.
ಆಶಾ ಭೋಸ್ಲೆ ಈಗ ಲಂಡನ್ನಲ್ಲಿ ಇದ್ದಾರೆ. ಅವರ ಲಂಡನ್ ಪ್ರವಾಸ ಭಾರತದ ಹಿರಿಯ ನಾಗರಿಕರಿಗೆ ನೆರವಾಗುವ ಸಲುವಾಗಿ. ಅವರು ಹಾಡಿನ ಕಾರ್ಯಕ್ರಮದಿಂದ ಬಂದ ಲಾಭ ಭಾರತದ ಹಿರಿಯ ನಾಗರಿಕರ ಚಾರಿಟಿಗೆ ಸಲ್ಲುತ್ತದೆ. ಶುಕ್ರವಾರ ಲಂಡನ್ನ ಅಲ್ಬರ್ಟ್ ಹಾಲ್ನಲ್ಲಿ ಆಶಾ ಹಾಡುಗಳ ಕಾರ್ಯಕ್ರಮ. ಹಾಲ್ ಭರ್ತಿ ಸಂಗೀತ ಪ್ರಿಯರು ಸೇರಿದ್ದರು. ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಶಾ ಭಾರತದಲ್ಲಿ ಹಿರಿಯ ನಾಗರಿಕರ ಪರಿಸ್ಥಿತಿಯ ಬಗ್ಗೆ ಮಾತನಾಡಿದರು.
ಅಪ್ಪ ಅಮ್ಮನ ಮುದ್ದಿನಿಂದಲೇ ಬೆಳೆಯುವ ಮಕ್ಕಳು ಕೈ ಕಾಲು ಗಟ್ಟಿಯಾದ ಕೂಡಲೇ ಹೆತ್ತವರ ಹಂಗು ತೊರೆಯುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂದು ಅಚ್ಚರಿಗೊಂಡ ಆಶಾ ರಾಮನ ಆದರ್ಶವನ್ನು ನೆನೆಸಿಕೊಂಡರು. ಅಪ್ಪನಿಗೋಸ್ಕರ ಚಕ್ರಾಧಿಪತ್ಯವನ್ನೇ ತ್ಯಜಿಸಿ ಕಾಡಿಗೆ ಹೋದವನು ರಾಮ. ಅಂಥವನನ್ನು ಆದರ್ಶ ಪುರುಷನನ್ನಾಗಿಸಿರಿಸಿಕೊಂಡ ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗೆ ಇಂಥ ಪರಿಸ್ಥಿತಿ ಬರಬಾರದಿತ್ತು ಅನ್ನುವುದು ಆಶಾ ಬೇಜಾರು.
ಮುಂಬಯಿಯಲ್ಲಿ ಶ್ರೀಮಂತ ವ್ಯಕ್ತಿಯಾಬ್ಬ ಆಸ್ತಿ ತನ್ನ ಹೆಸರಿಗೆ ಬರೆದುಕೊಡುವಂತೆ ಅಪ್ಪ ಅಮ್ಮನನ್ನು ಬಂಧಿಸಿ ಬೆದರಿಸುತ್ತಿದ್ದ. ಕೊನೆಗೆ ಆ ವೃದ್ಧ ದಂಪತಿಗಳು ಕಿಟಕಿಯಿಂದ ಹಾರಿ ಆತ್ಮ ಹತ್ಯೆ ಮಾಡಿಕೊಂಡರು. ಮುಖ್ಯವಾಗಿ ಸೊಸೆಯಂದಿರು ತಮ್ಮ ಅತ್ತೆ ಮಾವನನ್ನು ತಮ್ಮ ಹೆತ್ತವರಂತೆಯೇ ನೋಡಬೇಕು ಎಂಬುದು ಈಗಿನ ಯುವಜನತೆಗೆ ಆಶಾ ಕಿವಿ ಮಾತು.
ಈ ಸಂದರ್ಭದಲ್ಲಿ ಶಾಸ್ತ್ರೀಯ ಹಾಡುಗಳ ರಿ- ರೆಕಾರ್ಡಿಂಗ್ ಪ್ರಕ್ರಿಯೆಗೆ ಆಶಾ ತನ್ನ ವಿರೋಧ ವ್ಯಕ್ತಪಡಿಸಿದರು. ಆಶಾ ಫಾಸ್ಟ್ ಫುಡ್ ಸಿಂಗರ್ಗಳು ಹಳೆಯ ಹಾಡುಗಳನ್ನು ಮತ್ತೆ ಹಾಡಿದರೆ ಹಾಡಿನ ಒರಿಜಿನಾಲಿಟಿ ಕಳೆದು ಹೋಗುತ್ತದೆ. ಹೊಸ ತಲೆಮಾರಿನ ಜನರು ಹಳೆ ಗಾಯಕರ ಹಾಡಿನ ಸವಿಯಿಂದ ವಂಚಿತರಾಗುತ್ತಾರೆ. ಹಾಗಾಗದಿರಲಿ ಎನ್ನುವುದು ಆಶಾರ ಆಸೆ.(ಏಜೆನ್ಸೀಸ್)


Click it and Unblock the Notifications