ರಾಜ್ಯದಾದ್ಯಂತ ಪಂತುಲು ಚಲನ ಚಿತ್ರೋತ್ಸವ

ಪಂತುಲು ಜನ್ಮಶತಮಾನೋತ್ಸವ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ(ಕೆಸಿಎ) ರಾಜ್ಯದಾದ್ಯಂತ ಬಿ ಆರ್ ಪಂತುಲು ಚಿತ್ರೋತ್ಸವನ್ನು ಆಚರಿಸಲು ಮುಂದಾಗಿದೆ ಎಂದು ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್ ನಲ್ಲಿ ಕೆಸಿಎ ಅಧ್ಯಕ್ಷ ಟಿ ಎಸ್ ನಾಗಾಭರಣ ತಿಳಿಸಿದರು.
ಪಂತುಲು ನಿರ್ದೇಶನದ 19 ಚಿತ್ರಗಳ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಅವರ ಕುರಿತ ಪುಸ್ತಕವನ್ನು ಹೊರತರಲಾಗುತ್ತದೆ ಎಂದು ನಾಗಾಭರಣ ತಿಳಿಸಿದರು. ಇದಕ್ಕಾಗಿ ರು.25 ಲಕ್ಷಗಳನ್ನು ಚಲನಚಿತ್ರ ಅಕಾಡೆಮಿ ವೆಚ್ಚ ಮಾಡಲಿದೆ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೊದಲ ವಾರ್ಷಿಕೋತ್ಸ್ಸವನ್ನು ಆಚರಿಸಲಾಯಿತು.
ಬಿ ಆರ್ ಪಂತುಲು ನಿರ್ದೇಶನದ ಮಹತ್ವದ ಚಿತ್ರಗಳಲ್ಲಿ 'ಶ್ರೀ ಕೃಷ್ಣದೇವರಾಯ' ಸಹ ಒಂದು. ಈ ಚಿತ್ರದ ಸ್ಕ್ರಿಪ್ಟನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಪಂತುಲು ಅವರ ಪುತ್ರಿ ಬಿ ಆರ್ ವಿಜಯಲಕ್ಷ್ಮಿ ಹಸ್ತಾಂತರಿಸಿದರು. ಪಂತುಲು ಅವರ ಅದ್ಭುತ ಪ್ರತಿಭೆಯನ್ನು ಖ್ಯಾತ ಅಭಿನೇತ್ರಿ ಡಾ.ಬಿ ಸರೋಜಾ ದೇವಿ ನೆನೆದರು.
ಸರೋಜಾ ದೇವಿ ಅವರು ಮಾತನಾಡುತ್ತಾ, ಪಂತುಲು ಅವರ ಜೊತೆ ಕೆಲಸ ಮಾಡಿದ ಮಹನೀಯರನ್ನು ಸಂದರ್ಶಿಸುವ ಕಾರ್ಯಕ್ರಮವನ್ನು ದೂರದರ್ಶನ ವಾಹಿನಿ ಮಾಡಲಿ. ಪ್ರತಿ ದಿನ ಅರ್ಧ ಗಂಟೆ ಆ ಕಾರ್ಯಕ್ರಮವನ್ನು ಪ್ರಸಾರ ಮಾಡಲಿ ಎಂದು ಸಲಹೆ ನೀಡಿದರು. ಪಂತುಲು ಅವರ ಚಿತ್ರಗಳನ್ನು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ. ಪಂತುಲು ಚಿತ್ರಗಳಿಂದ ಇಂದಿನ ಪೀಳಿಗೆ ಕಲಿಯುವುದು ಬಹಳಷ್ಟಿದೆ ಎಂದರು.


Click it and Unblock the Notifications











