ಡೆಡ್ಲಿ ಆದಿತ್ಯ ಆಕ್ಷನ್, ಕಟ್ನಲ್ಲಿ ರಿಯಲ್ ಸ್ಟಾರ್ ಉಪ್ಪಿ
'ಸೂಪರ್' ಚಿತ್ರದಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಆದರೆ ಈ ಬಾರಿ ಅವರು ಚಿತ್ರವನ್ನು ನಿರ್ದೇಶಿಸುತ್ತಿಲ್ಲ. 'ಡೆಡ್ಲಿ' ಖ್ಯಾತಿಯ ಆದಿತ್ಯ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವುದು ವಿಶೇಷ. ಈ ಮೂಲಕ ಆದಿತ್ಯ ಚಿತ್ರ ನಿರ್ದೇಶನಕ್ಕೆ ಕೈಹಾಕುತ್ತಿದ್ದಾರೆ.
ಆದಿತ್ಯ ಅವರ ತಂದೆ ಹಾಗೂ ಜನಪ್ರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಹುಟ್ಟುಹಬ್ಬದ ದಿನ ಅಂದರೆ, ಅಕ್ಟೋಬರ್ 22, 2011ರಂದು ಚಿತ್ರಸೆಟ್ಟೇರಲಿದೆ. ಆದಿತ್ಯ ಸಿದ್ಧಪಡಿಸಿರುವ ಚಿತ್ರದಕತೆ ಉಪೇಂದ್ರ ಅವರಿಗೆ ಮಾತ್ರ ಒಪ್ಪುತದಂತೆ. ಹಾಗಾಗಿ ತಾನು ನಿರ್ದೇಶಿಸಲಿರುವ ಚೊಚ್ಚಲ ಚಿತ್ರಕ್ಕೆ ಉಪೇಂದ್ರ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಆದಿತ್ಯ.
ಈಗಾಗಲೆ ಕತೆಯನ್ನು ಉಪೇಂದ್ರ ಅವರಿಗೂ ಹೇಳಲಾಗಿದ್ದು ಅವರೂ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ ಎನ್ನುತ್ತವೆ ಮೂಲಗಳು. ಆದಿತ್ಯ ಈಗಾಗಲೆ ಹಲವಾರು ಚಿತ್ರಗಳಿಗೆ ಸಹಿಹಾಕಿದ್ದು, ಆ ಚಿತ್ರಗಳನ್ನು ಮುಗಿಸಿದ ಬಳಿಕವಷ್ಟೆ ಆಕ್ಷನ್, ಕಟ್ ಹೇಳಲಿದ್ದಾರೆ. 'ಸಿಕ್ಕಾಪಟ್ಟೆ ಇಷ್ಟಾಪಟ್ಟೆ', 'ಮಾಸ್' ಸೇರಿದಂತೆ ಆದಿತ್ಯ ಕೈಯಲ್ಲಿ ಒಟ್ಟು ಏಳು ಚಿತ್ರಗಳಿವೆ.
ಚಿತ್ರದ ನಾಯಕಿ, ತಂತ್ರಜ್ಞರ ಆಯ್ಕೆ ಹಾಗೂ ಚಿತ್ರ ಶೀರ್ಷಿಕೆ ಬಗ್ಗೆ ಚಿಂತನೆ ನಡೆಯುತ್ತಿದೆ.ಒಬ್ಬ ಪ್ರತಿಭಾವಂತ ನಿರ್ದೇಶಕ ಹಾಗೂ ನಟ ಉಪೇಂದ್ರ ಅವರಿಗೆ ಆಕ್ಷನ್, ಕಟ್ ಹೇಳುವುದೆಂದರೆ ನಿಜಕ್ಕೂ ಸವಾಲು. ಈ ಸವಾಲನ್ನು ಆದಿತ್ಯ ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು. [ಉಪೇಂದ್ರ]


Click it and Unblock the Notifications











