ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲಿದ್ದಾರೆ ಮಂಜು
ಸ್ಟುಡಿಯೋ ಒಂದನ್ನು ನಿರ್ಮಿಸುವುದೆಂದರೆ ಸಾಮಾನ್ಯದ ಮಾತೆ. ಕೋಟ್ಯಾಂತರ ರುಪಾಯಿ ಹಣಬೇಕು. ಅದರಲ್ಲೂ ಮುಖ್ಯವಾಗಿ ಸೀಮಿತ ಮಾರುಕಟ್ಟೆಯುಳ್ಳ ಕನ್ನಡ ಚಿತ್ರೋದ್ಯಮದಲ್ಲಿ ಸ್ಟುಡಿಯೋ ಮೂಲಕ ದುಡ್ಡು ಮಾಡಲು ಸಾಧ್ಯವೆ? ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುವುದಿಲ್ಲವೆ? ಎಂದು ಕೇಳಿದರೆ ಕೆ ಮಂಜು ಪಕಪಕ ನಗುತ್ತಾರೆ.
ಕೆ ಮಂಜು ಮಹತ್ತರವಾದ ಕೆಲಸಕ್ಕೆ ಕೈಹಚ್ಚಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಸ್ಟುಡಿಯೋ ಒಂದನ್ನು ನಿರ್ಮಿಸಲಿದ್ದಾರೆ. ಅಂದರೆ ಇದೊಂದು ಜಂಟಿ ಯೋಜನೆ. ಮಂಜು ತಮ್ಮ ಗೆಳೆಯನೊಂದಿಗೆ ಕೂಡಿ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸ್ಟುಡಿಯೋ ನಿರ್ಮಾಣದ ಜಾಗ ಗೆಳೆಯನದು ಬಂಡವಾಳ ಮಂಜು ಅವರದು.
ಈಗಿರುವ ಚಿತ್ರೀಕರಣ ತಾಣಗಳು ಸರಿಯಾಗಿ ಬಳಕೆಯಾಗುತ್ತಿಲ್ಲ. ಸುರಭಿ ಪಾರ್ಮ್ ನಂತಹ ಮನೆ ಬೇಕಾದರೆ ನಗರದಿಂದ 65 ಕಿ.ಮೀ ದೂರ ಹೋಗಬೇಕು. ಸಂಚಾರದ್ದೇ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗಳಿಗೆ ಅಂತ್ಯಹಾಡಬೇಕು ಎಂಬ ಉದ್ದೇಶದಿಂದ ಸಕಲ ಸೌಲಭ್ಯಗಳ ಸ್ಟುಡಿಯೋ ನಿರ್ಮಿಸಲು ಮುಂದಾಗಿದ್ದೇನೆ ಎನ್ನುತ್ತಾರೆ ಮಂಜು.
ಈಗಿರುವ ಸ್ಟುಡಿಯೋಗಳೇ ಪಾಳುಬಿದ್ದ ಕಟ್ಟಡಗಳಂತಾಗಿವೆ. ಕನ್ನಡದ ಹಿರಿಯ ನಟ ದಿವಂಗತ ಬಾಲಕೃಷ್ಣ ನಿರ್ಮಿಸಿದ್ದ ಅಭಿಮಾನ್ ಸ್ಟುಡಿಯೋ ನಮ್ಮ ಕಣ್ಣೆದುರಿಗಿದೆ.ಹೆಸರುಘಟ್ಟದಲ್ಲಿ ಫಿಲಂ ಸಿಟಿ ನಿರ್ಮಿಸಲು ಎಂಬತ್ತರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕೊಟ್ಟಂತಹ 350 ಎಕರೆ ಜಾಗ ಪಾಳುಬಿದ್ದ ಕೊಂಪೆಯಂತಾಗಿದೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟ್ಟುಕೊಂಡು ಕೆ ಮಂಜು ಸ್ಟುಡಿಯೋ ನಿರ್ಮಿಸುವುದು ಒಳಿತು ಎಂಬುದು ಅನುಭವಿಗಳ ಕಿವಿಮಾತು.


Click it and Unblock the Notifications











