ಸದ್ಯದಲ್ಲಿಯೇ ಪುನೀತ್ ಚಿತ್ರಕ್ಕೆ ಪಿ ವಾಸು ಆಕ್ಷನ್ ಕಟ್

ನಿರ್ದೇಶಕ ಪಿ. ವಾಸು ಅಂದರೆ ನೆನಪಾಗುವ ಚಿತ್ರಗಳು ಸಾಹಸಸಿಂಹ ವಿಷ್ಣುವರ್ಧನ್ ಅವರ 'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಚಿತ್ರಗಳು. ಅವೆರಡೂ ಕನ್ನಡ ಚಿತ್ರರಂಗದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಲ್ಲದೇ ಬಾಕ್ಸ್ ಆಫೀನ್ ನಲ್ಲಿ ಕೂಡ ಗೆದ್ದಿದ್ದವು. ಆದರೆ ವಾಸು ಅವರ ಇತ್ತೀಚಿನ 'ಆರಕ್ಷಕ' ಚಿತ್ರ ಮಾತ್ರ ಯಾಕೋ ಮಕಾಡೆ ಮಲಗಿದೆ. ಸಿನಿಮಾ ಚೆನ್ನಾಗಿದ್ದರೂ, ಗೊಂದಲ ಹೆಚ್ಚಾದ ಕಾರಣ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ದಿನಕಳೆದಂತೆ ಕಡಿಮೆಯಾಯ್ತು.
2008ರಲ್ಲಿಯೇ ಪುನೀತ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದ ವಾಸುಗೆ ಆಗ ಸಾಥ್ ಆಗಿದ್ದುದು ಶಿವಾಜಿ ಪ್ರೊಡಕ್ಷನ್ಸ್. ಸ್ವತಃ ವಾಸು ಕಥೆಯನ್ನು ಹಿಡಿದುಕೊಂಡು ಪುನೀತ್ ಮತ್ತು ರಾಘವೇಂದ್ರ ರಾಜ್ಕುಮಾರ್ ಬಳಿ ಹೋಗಿದ್ದರು. ಆದರೆ ಅಂದುಕೊಂಡಂತೆ ನಡೆಯಲಿಲ್ಲ. 'ಆಪ್ತರಕ್ಷಕ' ಚಿತ್ರದ ನಂತರ ಇದು ಇನ್ನೊಮ್ಮೆ ಸುದ್ದಿಯಾಯಿತಾದರೂ ನಂತರ ಮತ್ತೆ ಠುಸ್ಸಾಗಿತ್ತು.
ಇದೀಗ ಮತ್ತೆ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಮತ್ತೆ ಅದೇ ಪ್ರೊಜೆಕ್ಟ್ ಎದ್ದು ನಿಲ್ಲುವ ಸಾಧ್ಯತೆಗಳು ಗೋಚರಿಸುತ್ತಿವೆ. ಆದರೆ ನಿರ್ಮಾಪಕರು ಬದಲಾಗಿದ್ದಾರೆ. ಶಿವಾಜಿ ಪ್ರೊಡಕ್ಷನ್ಸ್ ಜಾಗದಲ್ಲಿ ಈಗ ಕೆ. ಪಿ. ಶ್ರೀಕಾಂತ್ ಇದ್ದಾರೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಲಿದ್ದಾರೆ, ಪಿಎಚ್ ಕೆ ದಾಸ್ ಕ್ಯಾಮರಾ ಹಿಡಿಯಲಿದ್ದಾರೆ. ಜೂನ್ ನಲ್ಲಿ ಮುಹೂರ್ತ ನಡೆಸಲು ತೀರ್ಮಾನಿಸಲಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











