ಯುಕೆಯಲ್ಲಿ ಪುಟ್ಟಣ್ಣ 'ಶುಭಮಂಗಳ' ರೀಮೇಕ್
ಮೂವತ್ತಾರು ವರ್ಷಗಳ ಹಿಂದಿನ ಕನ್ನಡ ಕ್ಲಾಸಿಕ್ ಚಿತ್ರವೊಂದನ್ನು ಮತ್ತೆ ರೀಮೇಕ್ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಕಡು ವ್ಯಾಮೋಹಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಶುಭಮಂಗಳ' ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಶ್ರೀನಿವಾಸ ರಾಜು. ಈ ಚಿತ್ರಕ್ಕೆ ನಾಯಕ ನಟ ಶ್ರೀನಗರ ಕಿಟ್ಟಿ ಅಲಿಯಾಸ್ ಶ್ರೀನಿವಾಸಮೂರ್ತಿ.
'ಸಂಜು ವೆಡ್ಸ್ ಗೀತಾ' ಹಾಗೂ 'ಹುಡುಗರು' ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಕಿಟ್ಟಿ 'ಶುಭಮಂಗಳ' ಚಿತ್ರವನ್ನು ಮನಸಾರೆ ಒಪ್ಪಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನ ನಡೆಯುತ್ತಿರುವುದು. ಚಿತ್ರದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ ಕಿಟ್ಟಿ.
1975ರಲ್ಲಿ ತೆರೆಕಂಡ ಪುಟ್ಟಣ್ಣ ನಿರ್ದೇಶನದ 'ಶುಭ ಮಂಗಳ' ಚಿತ್ರದಲ್ಲಿ ಪ್ರಣಯರಾಜ ಶ್ರೀನಾಥ್ ಹಾಗೂ ಆರತಿ ಮುಖ್ಯಪಾತ್ರಗಳಲ್ಲಿದ್ದರು. ಪ್ರಸ್ತುತ ಪ್ರೇಕ್ಷಕ ವರ್ಗದ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಮೂಲ ಚಿತ್ರಕತೆಗೆ ಧಕ್ಕೆಯಾಗದಂತೆ ರೀಮೇಕ್ ಮಾಡುವ ಭರವಸೆ ನೀಡಿದ್ದಾರೆ ಶ್ರೀನಿವಾಸರಾಜು.
ಸೆಪ್ಟೆಂಬರ್ ತಿಂಗಳಲ್ಲಿ ಸೆಟ್ಟೇರಲಿರುವ 'ಶುಭಮಂಗಳ' ಚಿತ್ರದ ಆರತಿ ಪಾತ್ರವನ್ನು ಭಾವನಾ ಪೋಷಿಸಲಿದ್ದಾರೆ. ಈ ಚಿತ್ರವನ್ನು ಯುಕೆಯಲ್ಲಿ ಚಿತ್ರೀಕರಿಸಲು ಶ್ರೀನಿವಾಸರಾಜು ಉದ್ದೇಶಿಸಿದ್ದಾರೆ. ಇದೊಂದು ಮಾಡ್ರನ್ ಚಿತ್ರವಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











