ಮಹಾ ಬುದ್ಧಿವಂತನಾದ ಸಿಲ್ಲಿ ಲಲ್ಲಿ ರವಿಶಂಕರ
ಸಿಲ್ಲಿ ಲಲ್ಲಿ ಸೀರಿಯಲ್ ನಲ್ಲಿ ವೇರಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ ಎನ್ನುತ್ತಾ ಎಲ್ಲರ ಹೃದಯ ಗೆದ್ದಿದ್ದ ರವಿಶಂಕರ್ ಅವರ ಸಿನಿ ಪಯಣ ಯಾಕೋ ಕುಂಟುತ್ತಾ ಸಾಗಿದೆ. ಸ್ವತಃ ಉತ್ತಮ ಗಾಯಕರಾದರೂ ಹಾಸ್ಯ ಪ್ರಧಾನ ಪಾತ್ರಕ್ಕೆ ಅಂಟಿಕೊಂಡ ರವಿಶಂಕರ್ ಗೆ ಪಯಣ ಉತ್ತಮ ಬ್ರೇಕ್ ನೀಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಉತ್ತಮ ಹಾಡು, ಅಭಿನಯ ಎಲ್ಲಾ ಇದ್ದರೂ ಜನಮೆಚ್ಚುಗೆ ಗಳಿಸಿತೇ ಹೊರತೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ.
ಮುಂದೆ ದಿಂಡಿಗಲ್ ಸಾರಥಿ ಎಂಬ ತಮಿಳು ಚಿತ್ರದ ಕನ್ನಡ ರಿಮೇಕ್ ನಂಜನಗೂಡು ನಂಜುಂಡ ನಾಗಿ ಕಾಣಿಸಿಕೊಂಡಿದ್ದು ಪ್ರಯೋಜನಕ್ಕೆ ಬರಲಿಲ್ಲ. ಆದರೆ, ಇದರಿಂದ ಧೃತಿಗೆಡದ ರವಿಶಂಕರ್ ಈಗ ಮಹಾಬುದ್ಧಿವಂತನಾಗಲು ಹೊರಟಿದ್ದಾರೆ. ಆದರೆ, ಈ ಚಿತ್ರ ಕೂಡಾ ರಿಮೇಕ್ ಚಿತ್ರನಾ ಅಥವಾ ಸ್ವಮೇಕಾ ಎಂದು ನಿರ್ಮಾಪಕರನ್ನು ಕೇಳಿದರೆ ಅಪ್ಪ ಮಗ ಮುಖ ಮುಖ ನೋಡಿಕೊಂಡರು. ಬಹುಶಃ ನಿರ್ದೇಶಕರು ಯಾರು ಎಂದು ಖಾತ್ರಿ ಪಡಿಸಿಕೊಂಡ ಮೇಲೆ ಚಿತ್ರದ ಕಥಾ ಹಂದರ ಬಗ್ಗೆ ನಿರ್ಮಾಪಕರು ಮಾತನಾಡುವ ಸಾಧ್ಯತೆಯಿದೆ.
ಸೂಪರ್ ಸ್ಟಾರ್ ಉಪೇಂದ್ರ ಅವರ ಯಶಸ್ವಿ ಚಿತ್ರ ಬುದ್ಧಿವಂತ ನಿರ್ದೇಶಿಸಿದ ರಾಮನಾಥ್ ಋಗ್ವೇದಿ ಅವರ ಮೇಲೇ ರೆಹಾನ್ ಎಂಟರ್ ಪ್ರೈಸಸ್ ನಂಬಿಕೆ ಇಟ್ಟು ಚಿತ್ರ ನಿರ್ಮಿಸುತ್ತಿದೆ. ರಾಮ್ ನಾರಾಯಣ್ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ. ಕೃಪಾಕರ್ ಸಂಗೀತ, ಶಂಕರ್ ಛಾಯಾಗ್ರಹಣವಿದೆ.
ಗಂಡ ಹೆಂಡತಿ, ಮೈಲಾಪುರ ಮೈಲಾರಿ ಹಾಡಿನ ಖ್ಯಾತಿಯ ಸಂಜನಾ ರವಿಶಂಕರ್ ಗೆ ಜೋಡಿಯಾಗಿ ನಟಿಸಲಿದ್ದಾರೆ. ಉಳಿದಂತೆ ರಂಗಾಯಣ ರಘು ಹಾಗೂ ಉಳಿದ ಸಿನಿಯರ್ ಪೋಷಕ ನಟ, ನಟಿಯರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫೆ. 1 ಕ್ಕೆ ಸೆಟ್ಟೇರಲಿರುವ ಈ ಚಿತ್ರ ಕಾಮಿಡಿ ಹಾಗೂ ಕುತೂಹಲಭರಿತ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ ಎಂದು ನಿರ್ಮಾಪಕ ನರ್ಗೀಸ್ ಬಾಬು ಅವರ ಪುತ್ರ ಖಮಾರ್ ಹೇಳುತ್ತಾರೆ. ರೆಹಾನ್ ಎಂಟರ್ ಪ್ರೈಸಸ್ ಈಗಾಗಲೆ ಏಳು ಚಿತ್ರಗಳನ್ನು ತೆರೆಗಿತ್ತ ದಾಖಲೆ ಹೊಂದಿದೆ. [ರವಿಶಂಕರ್]


Click it and Unblock the Notifications











