ಬಳ್ಳಾರಿ ಜೈಲಿಗೆ ವೀರಬಾಹು ದುನಿಯಾ ವಿಜಯ್!
ಇದೇನಿದು ಬಳ್ಳಾರಿ ಜೈಲಿಗೆ ದುನಿಯಾ ವಿಜಯ್. ಅವರೇನು ಅಂತಹ ತಪ್ಪು ಮಾಡಿದ್ದಾರೆ? ಬಳ್ಳಾರಿ ಜೈಲಿಗೆ ಯಾಕೆ ಹೋದರು? ಎಂದು ತಲೆಕೆಡಿಸಿಕೊಳ್ಳದೆ ಮುಂದೆ ಓದಿ. ಎಲ್ಲವೂ ನಿಮಗೇ ಅರ್ಥವಾಗುತ್ತದೆ!
ಚಿತ್ರದಲ್ಲಿ ನಾಯಕನದು ಶಾಂತ ಸ್ವಭಾವ. ಯಾರ ತಂಟೆಗೂ ಹೋದವನಲ್ಲ. ತನ್ನಷ್ಟಕ್ಕೆ ತಾನಿರುವಾತ. ಇಂಥ ವ್ಯಕ್ತಿಯ ಮೇಲೆ ಪೊಲೀಸಿನವರ ಕಣ್ಣು ಬೀಳುತ್ತದೆ. ಯಾರೊ ಮಾಡಿದ ಅಪರಾಧ ಈ ವ್ಯಕ್ತಿಯ ಮೇಲೆ ಬರುತ್ತದೆ. ಠಾಣೆಯಲ್ಲಿ ಬೆತ್ತದೇಟು ನೀಡಿದ ಪೊಲೀಸರು ಕೊನೆಗೆ ಈತನನ್ನು ಬಳ್ಳಾರಿ ಜೈಲಿಗೆ ಕಳಹಿಸುತ್ತಾರೆ.
ದುನಿಯಾ ವಿಜಯ್ ಅಭಿನಯಿಸುತ್ತಿರುವ 'ವೀರಬಾಹು' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈ ಸನ್ನಿವೇಶವನ್ನು ಮೈಸೂರಿನ ಸಮ್ಮರ್ ಪ್ಯಾಲೆಸ್ ಆವರಣದಲ್ಲಿ ಕಲಾ ನಿರ್ದೇಶಕ ರೇವಣ್ಣ ಮಳವಳ್ಳಿ ನಿರ್ಮಿಸಿದ ಜೈಲ್ ಸೆಟ್ನಲ್ಲಿ ಚಿತ್ರಿಸಿಕೊಳ್ಳಲಾಯಿತು. ನಾಯಕ ವಿಜಯ್ ಹಾಗೂ ಸಹ ಕಲಾವಿದರು ಈ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಮೈಸೂರಿನಲ್ಲಿ ಕೆಲವು ದಿನಗಳ ಚಿತ್ರೀಕರಣವಾದ ನಂತರ ಈಗ 'ವೀರಬಾಹು' ಚಿತ್ರದ ಚಿತ್ರೀಕರಣ ಮೇಲುಕೋಟೆಯಲ್ಲಿ ನಡೆಯುತ್ತಿದೆ ಎಂದು ನಿರ್ದೇಶಕ ಎಸ್.ಮಹೇಂದರ್ ತಿಳಿಸಿದ್ದಾರೆ. ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಅನಂತ್ ಅರಸ್ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಪ್ರಸಾದ್ ಸಹ ನಿರ್ದೇಶನ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ವಿಜಯಕುಮಾರ್ ನಿರ್ಮಾಣ ನಿರ್ವಹಣೆಯಿದೆ.
ಚಿತ್ರದ ತಾರಾಬಳಗದಲ್ಲಿ ವಿಜಯ್, ನಿಧಿಸುಬ್ಬಯ್ಯ, ರಂಗಾಯಣರಘು, ರಾಜುತಾಳಿಕೋಟೆ, ಅವಿನಾಶ್, ಎಂ.ಎನ್.ಲಕ್ಷ್ಮೀದೇವಿ, ಎ.ಟಿ.ರಘು, ಅಚ್ಯುತ, ವಿನಯಪ್ರಸಾದ್ ಮುಂತಾದವರಿದ್ದಾರೆ. ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ನಾಗರಾಜ್ ಅವರು ನಿರ್ಮಿಸುತ್ತಿರುವ ಚಿತ್ರ.


Click it and Unblock the Notifications











