ನನ್ನ ತಂಟೆಗೆ ಬರಬೇಡಿ ಅಂತ ಈಚೆಗಷ್ಟೇ ಕಡ್ಡಿ ತುಂಡುಮಾಡಿದ
ಸ್ಯಾಂಡಲ್ವುಡ್ವಿಷ್ಣುವರ್ಧನ್ ಹಾಗೂ ಮಲ್ಟಿವುಡ್ ಕಮಲ ಹಾಸನ್ ಹೆಚ್ಚೂ ಕಮ್ಮಿ ಒಟ್ಟೊಟ್ಟಿಗೇ ಬೆಳೆಯುತ್ತಾ ಬಂದವರು. ವಿಷ್ಣು ಇವತ್ತಿಗೂ ರೀಮೇಕಾಗಲೀ ಸ್ವಮೇಕಾಗಲೀ ಗೆಳೆಯರಿಗಾಗಿ ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆಯೇ ಹೊರತು, ತಮ್ಮದೇ ಆದ ಯಾವುದೇ ವೆಂಚರ್ಗೆ ಕೈ ಹಾಕುವ ಸಾಹಸ ಮಾಡಿಲ್ಲ. ಆದರೆ ಕಮಲ್ ಹಾಗಲ್ಲ. ಪಕ್ಕಾ ಪಾದರಸ. ಕೋಟಿಗಟ್ಟಲೆ ಸುರಿದ ಸಿನಿಮಾ ಬೋರಲಾದರೂ ಅವರು ತಕ್ಷಣವೇ ಪುಟಿದೆದ್ದು, ನವಿರು ಹಾಸ್ಯ ಚಿತ್ರ ಮಾಡಿ ಗಲ್ಲಾ ತುಂಬಿಕೊಳ್ಳುತ್ತಾರೆ. ನಡುನಡುವೆ ಗಡ್ಡ ಬಿಡುತ್ತಾರೆ, ಮಿಲಿಟರಿ ಕಟ್ ಮಾಡಿಸಿಕೊಳ್ಳುತ್ತಾರೆ. ಇವತ್ತು ವಯಸ್ಸು ಜಾಸ್ತಿಯಾದಂತೆ ಕಂಡು, ನಾಳೆ ಚಿಕ್ಕವರಾಗಿಬಿಟ್ಟಿರುತ್ತಾರೆ!
ಅಷ್ಟೇ ಅಲ್ಲ, ಕಮಲ್ ಒಬ್ಬ ಕವಿ. ರಸಿಕವಿ ಅಂತಲೂ ಹೇಳಬಹುದು. ಜನ ಬೇಡ ಅಂದರೆ ಸಿನಿಮಾಗೆ ಸಲಾಮು ಹೊಡೆಯಲು ಸಿದ್ಧ ಅಂತಲೇ ಜನಾಭಿಮಾನ ಗಿಟ್ಟಿಸಿಕೊಳ್ಳುವ ತುಂಟ. ಹುಡುಗಿಯರ ಪಟಾಯಿಸುವುದರಲ್ಲೂ ಪಂಟ! ಈಚೆಗೆ ಸಿಮ್ರಾನ್ ಜೊತೆ ತಮ್ಮ ಹೆಸರು ಜೋರಾಗಿ ಕೇಳಿಬರುತ್ತಿರುವುದಕ್ಕೆ ಕಮಲ್ ಕುಪಿತರಾಗಿದ್ದಾರೆ. ನನ್ನ ಸ್ವಂತ ವಿಷಯಕ್ಕೆ ನೀವ್ಯಾಕೆ ಬರುತ್ತೀರಾ ಅಂತ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ. ಈಗ ತಣ್ಣಗೆ ಕೂತು ಹೇಳುತ್ತಿದ್ದಾರೆ- ನನ್ನ ಜೀವನವನ್ನು ತೆರೆದ ಪುಸ್ತಕವಾಗಿಸುವುದೇ ಮುಂದಿನ ಪ್ರಾಜೆಕ್ಟ್. ಕಮಲ್ ಆತ್ಮ ಚರಿತ್ರೆ ಬರೆಯಲಿದ್ದಾರೆ.
ಕಮಲ್ ಆತ್ಮಚರಿತ್ರೆಯಲ್ಲಿ ವಾಣಿ ಗಣಪತಿ, ಸಾರಿಕಾ, ಸಿಮ್ರಾನ್, ಶ್ರೀದೇವಿ, ಭಾನುಪ್ರಿಯಾ, ಮೊನಿಷಾ ಕೊಯಿರಾಲ, ನೋವು, ಸಂತಸ, ಪ್ರಗತಿ- ವಿಗತಿ, ಹುಚ್ಚಾಟ- ತುಂಟಾಟ ಎಲ್ಲವೂ ಅಡಕವಾಗಲಿದೆಯಂತೆ. ಅಂದಹಾಗೆ, ಆತ್ಮಚರಿತ್ರೆ ಬರೆಯುವ ಇರಾದೆಯುಳ್ಳ ನಟರ ಯಾದಿ ತಯಾರಾಗುತ್ತಿದೆ. ಇದರಲ್ಲಿರುವ ಇನ್ನೊಬ್ಬ ನಟ ಬಾಲಿವುಡ್ನ ಶಾರುಖ್ ಖಾನ್ !
ಆತ್ಮ ಚರಿತ್ರೆ ಬರೆಯುವ ಮನಸ್ಸುಗಳು ಹೆಚ್ಚಾಗಿ ಹೊಮ್ಮಲು ಇವತ್ತಿನ ಪರಿಸ್ಥಿತಿಯಲ್ಲಿ ಏನಾದರೂ ಸೈಕಲಾಜಿಕಲ್ ಕಾರಣವಿದೆಯಾ? ಕಮಲ ಪ್ರವರ


Click it and Unblock the Notifications