ಪುಟ್ಟಣ್ಣನವರ ಅಪೂರ್ಣ ಚಿತ್ರ ‘ಸಾವಿರ ಮೆಟ್ಟಿಲು’ ಪೂರ್ಣ!
ನಾಡಿನ ಹೆಮ್ಮೆಯ ನಿರ್ದೇಶಕ ದಿವಂಗತ ಎಸ್.ಆರ್.ಪುಟ್ಟಣ್ಣ ಕಣಗಾಲ್ರ ಅಪೂರ್ಣ ಯೋಜನೆ ‘ಸಾವಿರಮೆಟ್ಟಿಲು’. ಈ ಚಿತ್ರವನ್ನು ಪೂರ್ಣಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇತ್ತೀಚೆಗೆ ಚಿತ್ರದ ಧ್ವನಿಸುರುಳಿಯನ್ನು ನಟ ವಿಷ್ಣುವರ್ಧನ್ ಬಿಡುಗಡೆ ಮಾಡಿದರು.
ಸುಮಾರು 38ವರ್ಷಗಳಷ್ಟು ಹಳೆಯದಾದ ‘ಸಾವಿರ ಮೆಟ್ಟಿಲು’ ಚಿತ್ರವನ್ನು ನಿರ್ಮಾಪಕ ಡಾ.ಡಿ.ಬಿ.ಬಸವೇ ಗೌಡ ಪೂರ್ಣಗೊಳಿಸುತ್ತಿದ್ದಾರೆ. ಆ ಮೂಲಕ ಹಳೆಯ ನೆನಪುಗಳು ಮರಳಿವೆ ಎಂದು ವಿಷ್ಣುವರ್ಧನ್ ಹೇಳಿದರು. ನಿರ್ಮಾಪಕರ ಪ್ರಯತ್ನವನ್ನು ಶ್ಲಾಘಿಸಿದರು.
ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ‘ಸಾವಿರ ಮೆಟ್ಟಿಲು’ ಪೂರ್ಣಗೊಳಿಸಲು ಶ್ರಮಿಸಿದ್ದಾರೆ. ಈ ಚಿತ್ರದ ಬಹುತೇಕ ನಟರು, ಮತ್ತು ತಂತ್ರಜ್ಞರು ಇಂದು ನಮ್ಮೊಂದಿಗಿಲ್ಲ. ಹೀಗಾಗಿ ಜಯಂತಿ ಮಾತ್ರ ತಮ್ಮ ಪಾತ್ರವನ್ನು ಮುಂದುವರೆಸಿದ್ದಾರೆ. 38ವರ್ಷಗಳ ನಂತರ ಪಾತ್ರ ಮುಂದುವರೆಸಿದ ವಿಶೇಷ ಅನುಭವ ಅವರದು.
ಚಿತ್ರದ ನಾಯಕ ದಿ.ಕಲ್ಯಾಣ್ಕುಮಾರ್. ಅವರ ಪಾತ್ರವನ್ನು ನಟ ರಾಮಕೃಷ್ಣ ಮತ್ತು ದಿ.ವಜ್ರಮುನಿ ಪಾತ್ರವನ್ನು ಸುಂದರ್ರಾಜ್ ಮುಂದುವರೆಸಿದ್ದಾರೆ. ಅನುಪ್ರಭಾಕರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಬಿಡುಗಡೆಗೆ ಸಕಲ ನೆರವು ನೀಡುವುದಾಗಿ ನಿರ್ಮಾಪಕರಿಗೆ, ಕರ್ನಾಟಕ ವಾಣಿಜ್ಯ ಮಂಡಲಿ ಅಧ್ಯಕ್ಷ ಹೆಚ್.ಡಿ.ಗಂಗರಾಜು ಭರವಸೆ ನೀಡಿದ್ದಾರೆ.
ಈ ಧ್ವನಿ ಸುರುಳಿಯಲ್ಲಿ ‘ಸಾವಿರ ಮೆಟ್ಟಿಲು’ ಚಿತ್ರದ ಹಾಡುಗಳು ಮತ್ತು ಇನ್ನಿತರ ಪುಟ್ಟಣ್ಣ ಕಣಗಾಲ್ ಚಿತ್ರಗಳ ಜನಪ್ರಿಯ ಹಾಡುಗಳಿವೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications