ಇದು ನಿಜಕ್ಕೂ ಮನೋಹರ ಶತಕ!
ಸೆಂಚುರಿ ಅನ್ನುವುದು ಮನೋಹರ್ಗೆ ಪುಳಕವನ್ನೇನು ತಂದಿಲ್ಲ. ಯಾವುದೋ ನೋವು, ಅತೃಪ್ತಿ ಮತ್ತು ವೇದನೆ ಅವರ ಮನದಿಂದ ಕೆಳಕ್ಕಿಳಿದಿಲ್ಲ.
- ಪುಷ್ಪಪಾದ
ಕಾಲ ಒಂದೇ ರೀತಿ ಇರೋದಿಲ್ಲ ಎಂಬುದಕ್ಕೆ ಮನೋಹರ್ ಮತ್ತೆ ಎದ್ದು ನಿಂತದ್ದೇ ನಿದರ್ಶನ. ಅವರು ಸಂಗೀತ ನೀಡಿದ ಇತ್ತೀಚಿನ ದುನಿಯಾ ಚಿತ್ರ, ಅವರ ಅಸ್ತಿತ್ವವನ್ನು ಮತ್ತೆ ಸಾಬೀತು ಮಾಡಿದೆ.
ಈಗ ವಿ.ಮನೋಹರ್ ಖುಷಿಯಲ್ಲಿದ್ದಾರೆ. ದುನಿಯಾ ಹಾಡುಗಳ ಯಶಸ್ಸಿನ ಖುಷಿ ಜೊತೆಗೆ, ಅವರ ಮುಂದಿನ ಇನ್ನೊಂದು ಸಂಭ್ರಮ ನೀನ್ಯಾರೇ?. ಈ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮನೋಹರ್ ಸೆಂಚುರಿ ಹೊಡೆದಿದ್ದಾರೆ.
ಆದರೆ ಮನೋಹರ್ಗೆ ಈ ಬಗ್ಗೆ ಹೇಳಿಕೊಳ್ಳುವಂತಹ ಖುಷಿಯೇನಿಲ್ಲ. ಯಾವುದೋ ನೋವು, ಅತೃಪ್ತಿ, ವೇದನೆ ಅವರ ಮನದಿಂದ ಕೆಳಕ್ಕಿಳಿದಿಲ್ಲ. ಇಂಥ ಸಣ್ಣ ಸಂಗತಿಗಳು ಈಗ ನನಗೆ ಖುಷಿ ನೀಡುವುದಿಲ್ಲ. ಮೈ ರೋಮಾಂಚಗೊಳಿಸುವುದಿಲ್ಲ ಎನ್ನುತ್ತಾರೆ ಮನೋಹರ್. ಯಾಕೋ ಅವರು ವೇದಾಂತಿಯಾದರು. ಆದರೂ ಬಣ್ಣದ ನಂಟು ಅವರನ್ನು ಜೀವಂತವಾಗಿಟ್ಟಿದೆ.
ಸದ್ಯಕ್ಕೆ ನಿರ್ದೇಶನದತ್ತ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಅಕ್ಕತಂಗಿ, ತುಂತುರು ಮಳೆ, ಗಣೇಶ ಮತ್ತೆ ಬಂದ ಮತ್ತಿತರ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದೇನೆ. ಅದರ ಜೊತೆಜೊತೆಗೆ ಬರೆವಣಿಗೆ ಮುಂದುವರೆಸುತ್ತೇನೆ ಎನ್ನುತ್ತಾರೆ ಮನೋಹರ್.
ತರ್ಲೆ ನನ್ಮಗ ನಿಂದ ಪ್ರಾರಂಭವಾದ ಚಿತ್ರಯಾತ್ರೆ, ನೀನ್ಯಾರೇ? ವರೆಗೆ ಮುಂದುವರೆದಿದೆ. ಅನುರಾಗ ಸಂಗಮ, ಜನುಮದ ಜೋಡಿ, ಜೋಡಿ ಹಕ್ಕಿ, ಗೆಜ್ಜೆನಾದ, ಓ ಮಲ್ಲಿಗೆ, ಚಿಗುರಿದ ಕನಸು, ಮಠ, ಮುನ್ನುಡಿ -ಹೀಗೆ ಮನೋಹರ್ ಸಂಗೀತದಾಟ, ಸಿನಿ ಪ್ರೇಮಿಗಳ ಮನಸೂರೆ ಮಾಡಿದೆ. ಹಾಡು ಕೇಳಿದವರು ಭಲೇ ಎಂದಿದ್ದಾರೆ.ಇನ್ನೇನು ಬೇಕ್ರೀ ಮನೋಹರ್?


Click it and Unblock the Notifications