‘ಕ್ಷಣಕ್ಷಣ’ ಮುಗಿವ ಮುನ್ನವೇ ‘ಸ್ನೇಹಪರ್ವ’ದಲ್ಲಿ ಸೌಮ್ಯ
‘ಮಿಸ್.ಕ್ಯಾಲಿಫೋರ್ನಿಯಾ’ ಚಿತ್ರ ಬಾಕ್ಸಾಫೀಸ್ನಲ್ಲಿ ಸೋತರೂ, ಚಿತ್ರದ ನಾಯಕಿ ಸೌಮ್ಯರ ಮುದ್ದಾದ ಮುಖ, ನಯ-ನಾಜೂಕಿನ ಅಭಿನಯ ಸ್ಯಾಂಡಲ್ವುಡ್ ಗಮನಿಸುವಂತೆ ಮಾಡುವಲ್ಲಿ ಸಫಲವಾಗಿದೆ. ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ಅವರು ಕಾಲೂರುತ್ತಿದ್ದಾರೆ.
ಅವಕಾಶಗಳು ಬಂದಾಗ ಬಾಚಿಕೊಳ್ಳೊನೆ ಜಾಣ. ಅಂತೆಯೇ ‘ಸ್ನೇಹ ಪರ್ವ’ ಚಾಚಿದ ಸ್ನೇಹಹಸ್ತವನ್ನು ಸಂತಸದಿಂದ ಒಪ್ಪಿಕೊಂಡಿದ್ದಾರೆ ಸೌಮ್ಯ. ಹೊಸಚಿತ್ರದ ಹಿನ್ನೆಲೆ ಅವರು ಮತ್ತೆ ಅಮೆರಿಕಾದಿಂದ ತವರಿಗೆ ಮರಳಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ‘ಸ್ನೇಹಪರ್ವ’ 15 ದಿನಗಳ ಚಿತ್ರೀಕರಣ ಮುಗಿಸಿದೆ. ಈ ಮಧ್ಯೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಕ್ಷಣಕ್ಷಣ’ದಲ್ಲೂ ಅವರು ಗಮನಸೆಳೆಯುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
‘ಸ್ನೇಹಪರ್ವ’ ಚಿತ್ರದ ಕತೆ ಇಷ್ಟವಾಯಿತು. ಇದೊಂದು ಡಿಫರೆಂಟ್ ಚಿತ್ರ. ನನ್ನದು ಡಿಫರೆಂಟ್ ಪಾತ್ರ. ನಿರ್ದೇಶಕ ಮುತ್ತುರಾಜ್ ವಿಭಿನ್ನ ಚಿತ್ರ ನೀಡಲು ಮುಂದಾಗಿದ್ದಾರೆ. ಹೀಗಾಗಿಯೇ ನಟಿಸಲು ಒಪ್ಪಿದೆ ಎಂದು ‘ದಟ್ಸ್ಕನ್ನಡ.ಕಾಂ’ಗೆ ಸೌಮ್ಯ ತಿಳಿಸಿದ್ದಾರೆ.
ಸ್ನೇಹಪರ್ವ, ಗೆಳೆತನದ ವಿವಿಧ ಮಜಲುಗಳನ್ನು ಬಿಚ್ಚಿಡುವ ಚಿತ್ರ. ಚಿತ್ರದ ನಾಯಕರಾಗಿ ಆನಂದ್(ಮಾಸ್ಟರ್ ಆನಂದ್, ಈಗ ಮಿಸ್ಟರ್ ಆನಂದ್ ಆಗಿದ್ದಾರೆ!), ತಮಿಳು ನಟ ಪಾರ್ಥ ಅಭಿನಯಿಸುತ್ತಿದ್ದು, ಸುಧೀರ್ ಪುತ್ರ ನಂದ, ಚೇತನ್ ತಾರಾಬಳಗದಲ್ಲಿದ್ದಾರೆ. ಆನಂದ್ ಸುಬ್ರಹ್ಮಣ್ಯಂ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications