ಎಲ್ಲರೂ ಬಾಯ ಮೇಲೆ ಬೆರಳಿಟ್ಟಿಕೊಳ್ಳುವಂಥಾ ವರಸೆ ಕೊಟ್ಟಿದ್ದಾರೆ
ಒಂದು ಕಾಲದಲ್ಲಿ ಮಲ್ಲೇಶ್ವರಂನ ಗಲ್ಲಿ ಗಲ್ಲಿಗಳಲ್ಲಿ ಚೀಲ ತಗಲಿ ಹಾಕಿಕೊಂಡು ಲೂನಾ ಮೇಲೆ ಓಡಾಡುತ್ತಾ, ಬೈಟೂ ಕಾಫಿ ಕುಡಿಯುತ್ತಲೇ ಸಿನಿಮಾ ಕನಸು ಕಂಡಿದ್ದ ಪ್ರಕಾಶ್ ರೈ, ಪ್ರಕಾಶ್ ರಾಜ್ ಆದ ಮೇಲೆ ಕನ್ನಡ ಸಿನಿಮಾಗೇ ಮಾಡಿದ್ದಾದರೂ ಏನು?
ಈ ಪ್ರಶ್ನೆ ಅವಾಗವಾಗ ಎರಗಲು ಕಾರಣವೂ ಇದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕನ್ನಡ ಸಿನಿಮಾ ಶೂಟಿಂಗ್ಗೆ ಅಂತ ಬಂದು ಹೋದಾಗಲೂ ಪ್ರಕಾಶ್ ರೈ ನಟನಾಗಿ ಮಾಡಿದ್ದು ಕಿರಿಕಿರಿ ಸುದ್ದಿಯನ್ನೇ. ದುಬಾರಿ ಪಂಚತಾರಾ ಹೊಟೇಲಲ್ಲೇ ತಂಗಬಯಸುವ ಲೋಲುಪ, ದುರಹಂಕಾರಿ ಎಂಬೆಲ್ಲಾ ಮಾತುಗಳ ಈತನ ಕುರಿತು ಹುಟ್ಟಿಕೊಂಡವು. ಅದೇನಾಯಿತೋ, ಇದ್ದಕ್ಕಿದ್ದಂತೆ ಪಿ.ಶೇಷಾದ್ರಿಯ 'ಅತಿಥಿ" ಸಿನಿಮಾದಲ್ಲಿ ಒಂದೇ ರುಪಾಯಿ ಇಸಿದುಕೊಂಡು ನಟನೆಗೆ ನಿಂತರು. ಅದು ಚಿಕ್ಕ ಪಾತ್ರವೇನೂ ಆಗಿರಲಿಲ್ಲ. ಪುಕ್ಕಟೆ ಎಂದು ಬೇಕಾಬಿಟ್ಟಿ ನಟಿಸಲೂ ಇಲ್ಲ. ಸಿನಿಮಾಗೆ ಪ್ರಶಸ್ತಿ ಬಂತು. ಮೂಗಿನ ಮೇಲೆ ಬೆರಳಾಡಿಸುತ್ತಲೇ ತಮ್ಮ ಎಂದಿನ ಶೈಲಿಯಲ್ಲಿ 'ಹೇಗೆ" ಎಂದು ನಕ್ಕಾಗ ಆತನ ಬಗ್ಗೆ ಕಟಕಿಯಾಡಿದವರೆಲ್ಲಾ ರಯ್ಯಾ !
ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸಿದರೂ ಸೌಂದರ್ಯ ಕನ್ನಡ ಚಿತ್ರ ನಿರ್ಮಿಸಿ ಸ್ವರ್ಣ ಕಮಲ ಮುಡಿದುಕೊಂಡರು. ಅತಿಥಿಗೂ ಪ್ರಶಸ್ತಿ ಬಂದಿದ್ದು ನನಗೆ ಖುಷಿ ಅಂತ ವಿಲನ್ ಧಾಟಿಯಲ್ಲೇ ಮಾತಾಡುವ ಪ್ರಕಾಶ್ ಈಗ ಪಿ.ಶೇಷಾದ್ರಿ ಪಾಲಿಗೆ ನಿಜವಾದ ನಾಯಕ. ಯಾಕೆಂದರೆ, ಮುಂದಿನ ಶೇಷಾದ್ರಿ ನಿರ್ದೇಶನಕ್ಕೆ ರೈ ನಾಯಕರಷ್ಟೇ ಅಲ್ಲ, ನಿರ್ಮಾಪಕರ ಪೈಕಿ ಒಬ್ಬರೂ ಹೌದು. ರೈಗೆ ಜೈ!


Click it and Unblock the Notifications