82ರ ಚಿರಯುವಕ ದೇವಾನಂದ್ರ ಆತ್ಮಕಥೆ ಸದ್ಯದಲ್ಲಿಯೇ...
ಮುಂಬಯಿ : ಹಿಂದಿ ಚಿತ್ರರಂಗದ ಚಿರಯುವಕ ಎಂದೇ ಕರೆಯಲ್ಪಡುವ ಹಿರಿಯ ನಟ ದೇವಾನಂದ್ ಅವರು, 82ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಈ ವಯಸ್ಸಿನಲ್ಲೂ ಚಿಮ್ಮುವ ಉತ್ಸಾಹ ಹೊಂದಿರುವ ದೇವಾನಂದ್ ಪ್ರಸ್ತುತ ‘ಮಿಸ್ಟರ್ ಪ್ರೆೃಮ್ ಮಿನಿಸ್ಟರ್’ ಎಂಬ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರೀಕರಣದ ಸ್ಥಳಕ್ಕೆ ಆಗಮಿಸಿದ ಅಭಿಮಾನಿಗಳು, ಸೋಮವಾರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ನಗುನಗುತ್ತಲೇ ಎಲ್ಲರಿಂದ ಶುಭಾಶಯ ಸ್ವೀಕರಿಸಿದ ಅವರು, ಯಾವುದೇ ಆಯಾಸಕ್ಕೆ ಒಳಗಾಗಿರುವಂತೆ ಕಾಣಲಿಲ್ಲ. ಆದರೆ ಅವರಿಗಿಂತ ತುಂಬಾ ಚಿಕ್ಕ ವಯಸ್ಸಿನವರೂ ಬೆವರು ಒರೆಸಿಕೊಳ್ಳುತ್ತಿದ್ದರು.
ಆರು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಅವರು, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಖ್ಯಾತಿಯನ್ನು ಪಡೆದವರು. ಸಿನಿಮಾ ಜೀವನದಲ್ಲಿ ಅವರು ಎಷ್ಟು ಶ್ರದ್ಧೆಯುಳ್ಳವರೋ, ಅಷ್ಟೇ ಶ್ರದ್ಧೆಯನ್ನು ಜೀವನದಲ್ಲೂ ಉಳಿಸಿಕೊಂಡವರು.
ಇದೀಗ ಅವರು ತಮ್ಮ ಆತ್ಮ ಕಥನದ ಬಹುತೇಕ ಭಾಗವನ್ನು ಬರೆದು ಮುಗಿಸಿದ್ದಾರೆ. ನಾನು ಜೀವನದಲ್ಲಿ ಕಂಡ ಕ್ಷಣಗಳನ್ನು ಪ್ರಾಮಾಣಿಕ ಬಿಂಬಿಸಿದ್ದೇನೆ. ಭಾರತ ಸ್ವಾತಂತ್ರ್ಯಪಡೆದಿದ್ದನ್ನು ಕಂಡಿದ್ದೇನೆ, ಮಹಾತ್ಮಾ ಗಾಂಧೀಜಿಯವರನ್ನು ಕಂಡಿದ್ದೇನೆ, ಭಾರತ-ಪಾಕಿಸ್ತಾನಗಳ ಮಧ್ಯೆ ನಡೆದ ಯುದ್ಧ ಕಂಡಿದ್ದೇನೆ, ಇಂದಿರಾ ಮತ್ತು ತುರ್ತು ಪರಿಸ್ಥಿತಿ ಕಂಡಿದ್ದೇನೆ... ಆನಂತರ ವಾಜಪೇಯಿ ಮತ್ತು ಎನ್ಡಿಎಯನ್ನೂ ಕಂಡಿದ್ದೇನೆ. ಆತ್ಮಕಥನದಲ್ಲಿ ಎಲ್ಲವನ್ನೂ ನನ್ನದೇ ದೃಷ್ಟಿಯಲ್ಲಿ ಹೇಳಿದ್ದೇನೆ.
ಆತ್ಮಕಥನದ ಇನ್ನೊಂದು ಅಧ್ಯಾಯ ಮಾತ್ರ ಬಾಕಿ ಇದೆ. ಅದು, ಪ್ರಸ್ತುತ ನಾನು ನಿರ್ಮಿಸುತ್ತಿರುವ ಮಿಸ್ಟರ್ ಪ್ರೆೃಮ್ ಮಿನಿಸ್ಟರ್ ಚಿತ್ರಕ್ಕೆ ಸಂಬಂಧಪಟ್ಟಿದೆ. ಹಾಗಾಗಿ ಈ ಚಿತ್ರ ಬಿಡುಗಡೆಯಾದ ನಂತರ, ಆ ಅಧ್ಯಾಯವನ್ನು ಪೂರ್ಣಗೊಳಿಸುತ್ತೇನೆ ಎಂದು ತಿಳಿಸಿದರು.
(ಪಿಟಿಐ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications