ದೇವರು ಕೊಟ್ಟರೆ ಹಂಗಿಂಗೆ ಕೊಡಲ್ಲ
ಉಪೇಂದ್ರ ವಿಗತಿಗೆ ಸಂಬಂಧಿಸಿದಂತೆ ಎರಡು ಸುದ್ದಿಗಳಿವೆ-ಒಂದು : ಉಪೇಂದ್ರ ನಟನೆಯ ಸಿನಿಮಾ ಕೆಸೆಟ್ಟುಗಳನ್ನು ಕೇಳೋರೇ ಇಲ್ಲ. ಎರಡು : ಮಮತಾ ರಾವ್ ಪುತ್ರಿ ರಕ್ಷಿತಾ ಉಪ್ಪಿ ಜೊತೆ ನಟಿಸೋಕೆ ಒಲ್ಲೆ ಅಂದರು !
'ಎಚ್ಟುಓ" ಚಿತ್ರದ ಕೆಸೆಟ್ಟುಗಳ ಹಕ್ಕು ಮಾರಾಟವಾಗಿದ್ದು 1 ಕೋಟಿ ರುಪಾಯಿಗೆ ಅಂತ ಮಾರುಕಟ್ಟೆ ತುಂಬಾ ಸದ್ದಾಗಿತ್ತು. 'ಸೂಪರ್ ಸ್ಟಾರ್" ಕೆಸೆಟ್ಟಿಗೆ ಇದರ ಅರ್ಧದಷ್ಟೂ ರೇಟು ಗಿಟ್ಟಲಿಲ್ಲ. ಅಕ್ಟೋಬರ್ 11ನೇ ತಾರೀಖು ತೆರೆ ಕಾಣಲಿರುವ 'ನಾನು ನಾನೇ" ಚಿತ್ರದ ಕೆಸೆಟ್ಟುಗಳ ರೇಟು ಪಾತಾಳಕ್ಕಿಳಿದು, ಹತ್ತೊ ಹನ್ನೆರಡೋ ಲಕ್ಷಕ್ಕೇ ಮಾರಾಟದ ಹಕ್ಕು ಬಿಕರಿಯಾಗಿದೆ ಎನ್ನುತ್ತಿದೆ ಕೆಸೆಟ್ ಮಾರುಕಟ್ಟೆ. ಒಂದು ಕಾಲದಲ್ಲಿ ಉಪ್ಪಿ ಚಿತ್ರದ ಕೆಸೆಟ್ಟು ಬಿಡುಗಡೆಯಾದರೆ, ಎಲ್ಲೆಲ್ಲೂ ಅವೇ ಹಾಡುಗಳು. ಈಗ ಉಪ್ಪಿ ಸಪಾಟಾಗಿ ತಾಚೊಂಡಿದ್ದಾರೆ ಅಂತ ಬೇರೆಯಾಗಿ ಹೇಳುವ ಅಗತ್ಯವಿಲ್ಲ.
ಉಪ್ಪಿಯೇ ಬೆಚ್ಚಿ ಬೀಳಬೇಕಾದಂಥ ಇನ್ನೊಂದು ಸುದ್ದಿಯೆಂದರೆ, ಬಡ್ಡಿಂಗ್ ನಾಯಕಿ ರಕ್ಷಿತಾ ಕೂಡ ಉಪ್ಪಿ ಜೊತೆ ನಟಿಸೋಕೆ ಒಲ್ಲೆ ಎಂದದ್ದು. ರಕ್ಷಿತಾಗೆ ಉಪ್ಪಿ ಜೊತೆ ನಟಿಸುವ ಆಸೆಯೇನೋ ಇತ್ತು. 'ರಕ್ತ ಕಣ್ಣೀರು" ಚಿತ್ರದ ಆಫರ್ ಬಂದಾಗ ಮೊದಲು ಸಂತೋಷವೂ ಆಯಿತು. ಅಮ್ಮ ಮಮತಾ ರಾವ್ ಯೋಚಿಸದೆ ಒಪ್ಪಿಕೋ ಅಂತ ಮಗಳ ತಲೆ ಸವರುತ್ತಿದ್ದರು. ಅಷ್ಟರಲ್ಲಿ ಅಪ್ಪ ಗೌರೀಶಂಕರ್ ಬಂದು, ಸುತಾರಾಂ ಬೇಡ ಅಂದುಬಿಟ್ಟರು. ಹಿರಿಯ ಛಾಯಾಗ್ರಾಹಕ ಗೌರಿ ಶಂಕರ್ಗೆ ಉಪ್ಪಿ ಅವತಾರಗಳು ಚೆನ್ನಾಗಿ ಗೊತ್ತು. ಚಿತ್ರೋದ್ಯಮವೂ ಚಿರ ಪರಿಚಿತ. ರಕ್ಷಿತಾ ಕ್ಲಾರಿಫಿಕೇಷನ್ ಕೇಳಿದಾಗ, 'ನಿನ್ನ ಫ್ಯೂಚರ್ ಚೆನ್ನಾಗಿರಬೇಕು ಅಂದರೆ ಉಪೇಂದ್ರ ಜೊತೆ ನಟಿಸಬೇಡ" ಅಂತಷ್ಟೇ ಹೇಳಿದರು. ಅಪ್ಪನ ಮಾತನ್ನು ರಕ್ಷಿತಾ ಒಪ್ಪಿಕೊಂಡಳು. 'ರಕ್ತ ಕಣ್ಣೀರಿ"ಗೆ ರಮ್ಯ ಕೃಷ್ಣ ನಾಯಕಿಯಾದಳು. ಉಪ್ಪಿಗೆ ಎಂಥ ಗತಿ ಬಂತು ನೋಡಿ !


Click it and Unblock the Notifications