ಪುಟ್ಟಣ್ಣ ಕಣಗಾಲ್ರ ‘ಸಾವಿರ ಮೆಟ್ಟಿಲು’ ಇಂದು ಬೆಳ್ಳಿತೆರೆಗೆ
ಪುಟ್ಟಣ್ಣ ಕಣಗಾಲ್ ಅಪೂರ್ಣ ನಿರ್ದೇಶನದ ‘ಸಾವಿರ ಮೆಟ್ಟಿಲು’ ಚಿತ್ರ 38ವರ್ಷಗಳ ನಂತರ, ಶುಕ್ರವಾರ ರಾಜ್ಯದಲ್ಲಿ ತೆರೆಕಂಡಿದೆ.
‘ಸಾವಿರ ಮೆಟ್ಟಿಲು’ ಚಿತ್ರದ ನಾಯಕಿ ಜಯಂತಿ, ತಮ್ಮ ಪಾತ್ರವನ್ನು 38ವರ್ಷಗಳ ನಂತರ ಪೂರ್ಣಗೊಳಿಸಿರುವುದು ಒಂದು ವಿಶೇಷ. ಅವರಿಗೀಗ 60ವರ್ಷ.
ಅಂದ ಹಾಗೇ ಈ ಚಿತ್ರ ನಟ ವಜ್ರಮುನಿ ಮತ್ತು ಸುಂದರ ಕೃಷ್ಣ ಅರಸ್ರ ಮೊದಲ ಚಿತ್ರವೂ ಹೌದು. ಅವರಿಬ್ಬರೂ ಇಂದು ನಮ್ಮೊಂದಿಗಿಲ್ಲ. ಅಷ್ಟು ಮಾತ್ರವಲ್ಲ ಚಿತ್ರಕ್ಕೆ ಜೀವತುಂಬಿದ ನಟ ಕಲ್ಯಾಣ್ಕುಮಾರ್, ಪಂಡರಿ ಬಾಯಿ, ಛಾಯಾಗ್ರಾಹಕ ಡಿ.ವಿ.ರಾಜಾರಾಂ, ಕಣಗಾಲ್ ಪ್ರಭಾಕರ ಶಾಸ್ತ್ರಿ, ವಿಜಯಭಾಸ್ಕರ್ ಸಹಾ ಅಗಲಿ ಬಹಳ ವರ್ಷಗಳಾಗಿವೆ.
ಚಿತ್ರದ ತಾರಾಗಣಕ್ಕೆ ಅನು ಪ್ರಭಾಕರ್, ಅಂಬರೀಷ್, ಪ್ರಭಾ, ರಾಮಕೃಷ್ಣ , ಮಾಸ್ಟರ್ ಹಿರಣ್ಣಯ್ಯ, ಸುಂದರರಾಜ್ ಮತ್ತಿತರರನ್ನು ಸೇರಿಸಿಕೊಳ್ಳಲಾಗಿದೆ.
ಛಲ ಬಿಡದ ತ್ರಿವಿಕ್ರಮನಂತೆ ಚಿತ್ರದ ನಿರ್ಮಾಪಕ ಡಿ.ಬಿ.ಬಸವೇಗೌಡ, ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಪುಟ್ಟಣ್ಣ ಅವರ ಶಿಷ್ಯ ಕೆ.ಎಸ್.ಎಲ್.ಸ್ವಾಮಿ, ಚಿತ್ರದ ಕಡೆ ಭಾಗವನ್ನು ನಿರ್ದೇಶಿಸಿದ್ದಾರೆ. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಚಿತ್ರದ ಸಂಗೀತಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ. ಎಸ್.ಜಾನಕಿ, ಪಿ.ಸುಶೀಲ, ಎಲ್.ಆರ್.ಈಶ್ವರಿ, ಪಿ.ಬಿ.ಶ್ರೀನಿವಾಸ್, ಸಂಗೀತ ಕಟ್ಟಿ, ಕೌಶಿಕ್ರ ಸುಮಧುರ ಕಂಠದಲ್ಲಿ ಹಾಡುಗಳು ಮೂಡಿಬಂದಿವೆ.
ಪುಟ್ಟಣ್ಣ ಅವರ ಸಿಟ್ಟಿನ ಮನಸ್ಥಿತಿಯಿಂದ ಚಿತ್ರ ಅಪೂರ್ಣಗೊಂಡಿತ್ತು ಎನ್ನಲಾಗಿದೆ.


Click it and Unblock the Notifications