ವೆಂಕಟನ ಸಂಕಟಕ್ಕೆ ತುಪ್ಪ ಸುರಿದ ಬಾಂಬು
ಇದು ವೆಂಕಟನ ಸಂಕಟದ ಸಮಯ. ನಗರದ ಸುಪ್ರಸಿದ್ದ ಮಳಿಗೆಯೊಂದರಲ್ಲಿ ಕಿಡಿಗೇಡಿಗಳು ಬಾಂಬ್ ಇರಿಸಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್.ಐ ವೆಂಕಟ ಬಾಂಬ್ ನಿಷ್ಕ್ರಿಯಗೊಳಿಸಿ ನಿಟ್ಟುಸಿರು ಬಿಡುತ್ತಾನೆ.
ಆದರೆ ವೆಂಕಟನಿಗೆ ಪರಿಸ್ಥಿತಿ ಅನುಕೂಲವಾಗಿರಲಿಲ್ಲ. ಮಿ.ಲಡ್ಡು ಎಂಬ ಪೊಲೀಸ್ ಪೇದೆ ತನ್ನ ಕಡೆಗೆ ಈ ಯಶಸ್ಸಿನ ಗುಟ್ಟನ್ನು ಸೆಳೆದಾಗಿರುತ್ತದೆ. ಸಾಲದುದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಶಂಸೆಯ ಹಾರ. ಜೊತೆಗೆ ಬಡ್ತಿಯ ಘೋಷಣೆ ಬೇರೆ. ಮಾಧ್ಯಮಗಳೆದುರು ಮುಕ್ತಕಂಠದ ಹೊಗಳಿಕೆಯ ಸನ್ಮಾನ. ಇಂತಿಪ್ಪ ಘಟನೆಗಳಿಂದ ಅವಾಕ್ಕಾದ ವೆಂಕಟ ತನ್ನ ಯಶಸ್ಸು ಕಣ್ಣೆದುರಲ್ಲಿಯೇ ಅಪಾತ್ರರ ಮಡಿಲಿಗೆ ಬೀಳುತ್ತಿರುವ ಘಟನೆಗಳನ್ನು ಕಣ್ಕಣ್ ಬಿಟ್ಟು ನೋಡಿ ಸುಸ್ತಾಗುತ್ತಾನೆ.
ಹಿರಿಯ ಪೊಲೀಸ್ ಅಧಿಕಾರಿಯಾಗಿ ಮುಖ್ಯಮಂತ್ರಿ ಚಂದ್ರು, ಪೊಲೀಸ್ಪೇದೆ ಪಾತ್ರದಲ್ಲಿ ಪ್ರಸಿದ್ದ ಹಾಸ್ಯ ತಜ್ಞ ಮಂಗಳೂರಿನ ದೇವದಾಸ್ ಕಪ್ಪಿಕಡ್, ಸಂಕಟ ಅನುಭವಿಸುವ ವೆಂಕಟನಾಗಿ ರಮೇಶ್ ಅಭಿನಯಿಸಿದರು. ನಗರದ ಸುಪ್ರಸಿದ್ದ ವ್ಯಾಪಾರಿ ಮಳಿಗೆ ಗೋಪಾಲನ್ ಮಾಲ್ನಲ್ಲಿ ನಡೆದ ಚಿತ್ರೀಕರಣದಲ್ಲಿ ಈ ದೃಶ್ಯಗಳು ಮಾತ್ರ ಅಲ್ಲದೆ ಇನ್ಸ್ಪೆಕ್ಟರ್ ಪಾತ್ರಧಾರಿ ರಮೇಶ್ ಬಾಂಬ್ ನಿಷ್ಕ್ರಿಯಗೊಳಿಸಲು ಬಹುಮಹಡಿ ಕಟ್ಟಡಗಳನ್ನು ತಂತಿ ಸಹಾಯದಿಂದ ಏರಿಳಿಯುವ ರೋಮಾಂಚಕಾರಿ ಸನ್ನಿವೇಶಗಳನ್ನು ಸಹ ಚಿತ್ರೀಕರಿಸಿಕೊಳ್ಳಲಾಯಿತು.
ನರೇನ್ ಮಗಲಾನಿ ಅವರು ಸಿನಿಮಾಹೌಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ವೆಂಕಟ ಇನ್ ಸಂಕಟ ಚಿತ್ರವನ್ನು ರಮೇಶ್ಅರವಿಂದ್ ನಿರ್ದೇಶಿಸುತ್ತಿದ್ದಾರೆ. ರವಿಜೋಷಿ ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರಕ್ಕೆ ರಿಕ್ಕಿಕೇಜ್ ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ನಂದ ಸಂಭಾಷಣೆ, ಎ.ಎನ್.ಮೂರ್ತಿ, ರವಿವರ್ಮ ಸಾಹಸ, ಮದನ್ ಹರಿಣಿ ನೃತ್ಯ, ಬಾಲಾಜಿಮನೋಹರ್, ಧನಂಜಯ ಬಾಲಾಜಿ ಸಹನಿರ್ದೇಶನ, ರಮೇಶ್ದೇಸಾಯಿ ಕಲೆ, ಟಿ.ಎನ್.ಎಲ್.ಶಾಸ್ತ್ರಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್ಅರವಿಂದ್, ಶರ್ಮಿಳಾಮಾಂಡ್ರೆ, ಮೇಘನ ಮುಡಿಯನ್, ಅನುಶಾ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಪ್ಪಿಕಡ್, ಎಂ.ಎಸ್.ಉಮೇಶ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿ ವಾರ್ತೆ)
ಬೆಂಗಳೂರಿನಲ್ಲಿ ವೆಂಕಟ ರಮೇಶನ ಸಂಕಟ
ವೆಂಕಟ ಇನ್ ಸಂಕಟನಾಗಿ ರಮೇಶ್


Click it and Unblock the Notifications