ಬೆಳ್ಳಿಪರದೆಗೆ ಅಣ್ಣಾ ಕುಮಾರಣ್ಣ ಕನ್ನಡ ಕಲರ್ ಸ್ಕೋಪ್!
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೀವನಚರಿತ್ರೆ ಆಧಾರಿತ ಚಿತ್ರ ಮಾಡುವುದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ಅದ್ಯಾವುದೋ 'ಗ್ಯಾನ'ದಲ್ಲಿ ಹೇಳಿದ್ದರು. ಈಗ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯ ಜೀವನ, ಸಾಧನೆಗಳ ಚಿತ್ರ ಕನ್ನಡ ಕಲರ್ ಸ್ಕೋಪ್ನಲ್ಲಿ ಮೂಡಿಬರಲಿದೆ!
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಬಾಳು, ಬದುಕು ಆಧರಿಸಿದ ಈ ಚಿತ್ರದ ಹೆಸರು 'ಅಣ್ಣಾ ಕುಮಾರಣ್ಣ'. ಈ ಮಹತ್ವಾಕಾಂಕ್ಷಿ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ನಿರ್ಮಾಪಕ ಕೃಷ್ಣಂರಾಜು. ಇವರು ಈ ಹಿಂದೆ ಸಾಂಗ್ಲಿಯಾನ, ಸಂಘರ್ಷ, ಅಧಿಪತಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಅಣ್ಣಾ ಕುಮಾರಣ್ಣ' ಶೀರ್ಷಿಕೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ.
ಮತ್ತೊಂದು ವಿಶೇಷ ಸಂಗತಿ ಎಂದರೆ ಚಿತ್ರದ ನಾಯಕ ನಟನ ಸ್ಥಾನಕ್ಕೆ ಸ್ವತಃ ಕುಮಾರಣ್ಣನ್ನು ಸಂಪರ್ಕಿಸಿದ್ದಾರೆ ಕೃಷ್ಣಂರಾಜು. ಆದರೆ ಎಚ್ಡಿಕೆ ನಸು ನಕ್ಕು ಆಯ್ತು ನೋಡೋಣ ಎಂದಿದ್ದಾರೆ. ಚಿತ್ರದ ನಾಯಕಿಯ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











