ಕೈ ಮುಗಿದು ಏರು ಇದು ಕನ್ನಡದ 'ಸಾರಥಿ' ತೇರು
ತಾನು ಹುಟ್ಟಿ ಬೆಳೆದ ನಾಡಿನ ಬಗ್ಗೆ ಪ್ರತಿಯೊಬ್ಬನಿಗೂ ಗೌರವವಿರಬೇಕು. ಮಾತೃಭಾಷೆಯನ್ನು ಮಾತೆಯಷ್ಟೆ ಪ್ರೀತಿಸಬೇಕು ಎಂದು ಹಿರಿಯರು ಹೇಳುತ್ತಾರೆ. 'ಸಾರಥಿ' ಚಿತ್ರದ ನಾಯಕನಿಗೂ ಕನ್ನಡವೆಂದರೆ ಪಂಚಪ್ರಾಣ. ಆತ ಓಡಿಸುವ ಆಟೋ ಕೂಡ ಕನ್ನಡದ ಪ್ರಸಿದ್ಧ ಗಾದೆ, ಸುಭಾಷಿತಗಳಿಂದ ತುಂಬಿ ಹೋಗಿದೆ.
'ಕೈ ಮುಗಿದು ಏರು ಇದು ಕನ್ನಡ ತೇರು, ನಂಬಿ ಬಂದು ಕೂರು ಇದು ಕನ್ನಡಿಗನ ತೇರು" ಎಂದು ವಿ.ನಾಗೇಂದ್ರಪ್ರಸಾದ್ ರವರು ಬರೆದಿರುವ ಗೀತೆಯನ್ನು ಹೇಳುವ ಮೂಲಕ 'ಸಾರಥಿ ಪ್ರಯಾಣಿಕರಿಗೆ ಸ್ವಾಗತ ಕೋರುತ್ತಾನೆ. ಇದು ಆತನ ಭಾಷಾಭಿಮಾನಕ್ಕೆ ಸಾಕ್ಷಿ.
ಮೇಲಿನ ಗೀತೆಯನ್ನು 'ಸಾರಥಿ' ಚಿತ್ರಕ್ಕಾಗಿ ನಿರ್ದೇಶಕ ದಿನಕರ್ ತೂಗುದೀಪ ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಚಿತ್ರಿಸಿಕೊಂಡರು. ರಾಮು ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ದರ್ಶನ್, ಬುಲೆಟ್ ಪ್ರಕಾಶ್ ಮತ್ತು ಸಹ ಕಲಾವಿದರು ಭಾಗವಹಿಸಿದ್ದರು.
ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ, ಪಳನಿರಾಜ್ ಸಾಹಸ, ಮದನ್ ಹರಿಣಿ, ಹರ್ಷ ಹಾಗೂ ರಾಮು ನೃತ್ಯ, ದಿನಕರ್ ತೂಗುದೀಪ ಮತ್ತು ಚಿಂತನ್ ಕಥೆ ಹಾಗೂ ಮೂರ್ತಿ ಅವರ ನಿರ್ಮಾಣ ನಿರ್ವಹಣೆಯಿದೆ.
ಚಿತ್ರದ ತಾರಾಬಳಗದಲ್ಲಿ ದರ್ಶನ್, ದೀಪು, ರಂಗಾಯಣರಘು, ಲೋಹಿತಾಶ್ವ, ಅಜಯ್, ಬುಲೆಟ್ ಪ್ರಕಾಶ್, ಸಿತಾರ, ಶರತ್ಕುಮಾರ್, ಶರತ್ ಲೋಹಿತಾಶ್ವ, ಮುನಿ, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ. ರಾಜ್ಕಮಲ್ ಆರ್ಟ್ಸ್ ಲಾಂಛನದಲ್ಲಿ ಕೆ.ಸಿ.ಎನ್ ಚಂದ್ರಶೇಖರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.


Click it and Unblock the Notifications











