ಬಣ್ಣ ಹಚ್ಚಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರಿಗೂ ಸಿನಿಮಾಗೂ ಹಳೆಯ ನಂಟು. ಈ ನಂಟು ಈಗ ಮತ್ತೆ ಅವರು ಬಣ್ಣ ಹಚ್ಚುವಂತೆ ಮಾಡಿದೆ. ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆ ಕುಮಾರಸ್ವಾಮಿ ಕೊಂಚ ಬಿಡುವು ಮಾಡಿಕೊಂಡು 'ಶಿವಕಾಶಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಮೇಲೆ ಕುಮಾರಸ್ವಾಮಿ ಭಾಷಣ ಬಿಗಿಯುವ ಸನ್ನಿವೇಶವನ್ನು ಸೆರೆಹಿಡಿಯಲಾಯಿತು. ವೇದಿಕೆ ಮೇಲೆ 'ಮುಂಗಾರು ಮಳೆ' ನಿರ್ಮಾಪಕ ಈ ಕೃಷ್ಣಪ್ಪ, ಜೆಡಿಎಸ್ ನಾಯಕ ಗೋಪಾಲಯ್ಯ ಮತ್ತಿತರು ಉಪಸ್ಥಿತರಿದ್ದರು. ಕುಮಾರಸ್ವಾಮಿ ಅಭಿನಯದ ಇನ್ನೊಂದು ದೃಶ್ಯವನ್ನು ಮಂಡ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತದಂತೆ.
ಕುಮಾರಸ್ವಾಮಿ ಅವರು ಬಣ್ಣ ಹಚ್ಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಪ್ರೀತಿ ಏಕೆ ಭೂಮಿ ಮೇಲಿದೆ' ಹಾಗೂ 'ಸಿದ್ಧಗಂಗಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಶಿವಕಾಶಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಬಿ.ರಾಮ್ಪ್ರಕಾಶ್. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಗಂಧರ್ವ ಅವರ ಸಂಗೀತ ಸಂಯೋಜನೆಯಿದೆ.
ಮಂಡ್ಯದ ಮಹದೇವಯ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಿವ ಮತ್ತು ಕಾಶಿ ಎಂಬ ಇಬ್ಬರು ಯುವಕರ ಸುತ್ತ ಕತೆ ಸುತ್ತುತ್ತದೆ. ಅಜಿತ್ ಮತ್ತು ಯೋಗೀಶ್ವರ್ ಚಿತ್ರದ ನಾಯಕ ನಟರು. ಚಿತ್ರಕ್ಕೆ ನಾಯಕಿ ಒಬ್ಬಳೆ ಮಾನಸಿ. ಅನಂತನಾಗ್ ಮತ್ತು ಲಕ್ಷ್ಮಿ ಜೋಡಿಯನ್ನು ಇಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು. ಸ್ವಾಮಿ ನಿತ್ಯಾನಂದನ ಪರಮ ಭಕ್ತೆ ರಂಜಿತಾ ಚಿತ್ರದ ಹಾಡೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬುದು ಈ ಚಿತ್ರದ ಲೇಟೆಸ್ಟ್ ಸುದ್ದಿ.


Click it and Unblock the Notifications











