ಮೇ 11ಕ್ಕೆ ಉಪೇಂದ್ರ ಗಾಡ್ಫಾದರ್ ಚಿತ್ರ ಗ್ಯಾರಂಟಿ
ಮುನಿರತ್ನ ಹಾಗೂ ಕೆ ಮಂಜು ನಡುವಿನ ಜಟಾಪಟಿ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶುಕ್ರವಾರ (ಏ.27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ನಿರ್ಮಾಪಕ ಕೆ ಮಂಜುಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಇಬ್ಬರೂ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಫಿಲಂ ಚೇಂಬರ್ ಕಾರ್ಯದರ್ಶಿ ಸಾ.ರಾ.ಗೋವಿಂದು ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಮಂಜು ಅವರು ತಮ್ಮ 'ಗಾಡ್ಫಾದರ್' ಚಿತ್ರವನ್ನು ಮೇ 8ರೊಳಗೆ ಸೆನ್ಸಾರ್ ಮಾಡಿಸಬೇಕು. ಒಂದು ವೇಳೆ ವಿಫಲರಾದರೆ ಮೇ 10ಕ್ಕೆ 'ಕಠಾರಿವೀರ ಸುರಸುಂದರಾಂಗಿ' ಬಿಡುಗಡೆ ಮಾಡಬಹುದು ಎಂದಿದ್ದಾರೆ.
'ಕಠಾರಿವೀರ' ಬಿಡುಗಡೆಯಾದ ನಂತರ ಎಂಟು ವಾರಗಳ ಬಳಿಕ ಮಂಜು ತಮ್ಮ 'ಗಾಡ್ಫಾದರ್' ಬಿಡುಗಡೆ ಮಾಡಬಹುದು ಎಂದು ಫಿಲಂ ಚೇಂಬರ್ ತೀರ್ಪು ನೀಡಿದೆ. ಈ ಬಗ್ಗೆ ತೃಪ್ತರಾಗದ ಮಂಜು ಕೋಪಗೊಂಡು ಸಭೆಯಿಂದ ಮಧ್ಯದಲ್ಲೇ ಎದ್ದು ಹೊರಹೋದ ಘಟನೆಯೂ ನಡೆದಿದೆ.
ಬಳಿಕ ಪ್ರತಿಕ್ರಿಯಿಸಿರುವ ಮಂಜು, "ಮೇ 7 ಅಥವಾ 8ರೊಳಗೆ ತಮ್ಮ 'ಗಾಡ್ಫಾದರ್' ಚಿತ್ರವನ್ನು ಸೆನ್ಸಾರ್ ಮಾಡಿಸುತ್ತೇನೆ. ಮೇ 11ಕ್ಕೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ" ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದ ಪ್ರಥಮ ಪ್ರತಿ ಇನ್ನೂ ರೆಡಿಯಾಗಿಲ್ಲ. ಆಡಿಯೋ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ ಎನ್ನುತ್ತವೆ ಮೂಲಗಳು.
ಆದರೆ 'ಕಠಾರಿವೀರ' ಚಿತ್ರದ 2D ಮತ್ತು 3D ಆವೃತ್ತಿಗಳು ಸೆನ್ಸಾರ್ ಆಗಿದ್ದು ಮೇ 11ಕ್ಕೆ ಬಿಡುಗಡೆಯಾಗುವ ಎಲ್ಲಾ ಸೂಚನೆಗಳು ಇವೆ. ಇವರಿಬ್ಬರ ಗಲಾಟೆಯಲ್ಲಿ 'ಅಣ್ಣಾಬಾಂಡ್'ಗೆ ಲಾಭ ಆಗಿದೆ. ಮೇ 1ರಂದು ಬಿಡುಗಡೆಯಾಗುತ್ತಿರುವ ಪುನೀತ್ 'ಅಣ್ಣಾಬಾಂಡ್' ಮಾತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಯಾವುದೇ ಪ್ರತಿಸ್ಪರ್ಧಿಗಳಿಲ್ಲ. (ಒನ್ಇಂಡಿಯಾ ಕನ್ನಡ)


Click it and Unblock the Notifications











