ನಕಲಿ ಸಿಡಿಜಾಲದಲ್ಲಿ ಗಣೇಶ್ ಚಿತ್ರಗಳಿಗೆ ಡಿಮ್ಯಾಂಡ್
ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಿತ್ರ ಅರಮನೆ ಬಿಡುಗಡೆಯಾದಾಗ ಜನ ಮುಗಿಬಿದ್ದು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದರು. ವಾರ ಕಳೆದಂತೆ ಜನ ಬರುವುದು ಕಮ್ಮಿಯಾಗುತ್ತಿರುವುದನ್ನು ಕಂಡು ಆತಂಕಗೊಂಡ ನಿರ್ಮಾಪಕ ಕೆ. ಮಂಜು. ಅಂದೇ ಇದಕ್ಕೆ ಕಾರಣವನ್ನು ಕಂಡುಕೊಂಡರು. ಪೈರಸಿ ಜಾಲವನ್ನು ಬೇಧಿಸಲು ತಂಡವನ್ನು ರಚಿಸಿಕೊಂಡು ಸಿನೀಮಯ ಮಾದರಿಯಲ್ಲಿ ನಕಲಿ ಸಿಡಿ ಜಾಲವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆ. ಮಂಜು ತಂಡ ಹಾಗೂ ನಗರದ ಪೊಲೀಸರು ಹಿಡಿದ ನಕಲಿ ಸಿಡಿ ಮಾರಾಟಗಾರ ಮಧು, ಚನ್ನರಾಯಪಟ್ಟಣ ಮೂಲದವನು. ಇನ್ನೊಬ್ಬ ಪರಾರಿಯಾಗಿದ್ದಾನೆ.
ಗಣೇಶ್ ಅವರ ಅರಮನೆ ಚಿತ್ರವಷ್ಟೇ ಅಲ್ಲ. ಗಾಳಿಪಟ, ಚೆಲ್ಲಾಟ,ಮುಂಗಾರುಮಳೆ, ಪುನೀತ್ ಅವರ ಆಕಾಶ್, ಯೋಗೀಶ್ ಅವರ ನಂದ ಲವ್ಸ್ ನಂದಿತಾ ಸೇರಿದಂತೆ ಬಿಡುಗಡೆಗೊಳ್ಳುವ ಹೊಚ್ಚಹೊಸ ಕನ್ನಡ ಚಿತ್ರಗಳು ಅಗ್ಗದ ದರದಲ್ಲಿ (ಕೇವಲ 30 ರು ಇಂದ ಗರಿಷ್ಠ 50 ರು) ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ. ಎರಡು ಮೂರು ಸಿನಿಮಾಗಳ ಕಾಂಬೀನೇಷನ್ ಜತೆಯಿರುವ ಡಿವಿಡಿಗಳು ಲಭ್ಯ.
ಪೈರಸಿ ಮಾಡುತ್ತಿರುವವರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಈ ಬಗ್ಗೆ ಹಿಂದಿನ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಪೈರಸಿ ಜಾಲದಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಸತ್ಯ. ಸಾಲಸೋಲ ಮಾಡಿ ಕೋಟ್ಯಾಂತರ ರುಪಾಯಿ ಹಣ ಸುರಿದು ,ಚಿತ್ರ ನಿರ್ಮಿಸುತ್ತೇವೆ. ಆದರೆ ಪೈರಸಿಯಿಂದ ಆಗುವ ನಷ್ಟದಿಂದ ನಿರ್ಮಾಪಕರು ಅತ್ಯಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ನಕಲಿ ಸಿಡಿಗಳ ಗುಣಮಟ್ಟ ತೀರಾ ಕಳಪೆಯಾಗಿರುತ್ತದೆ. ಇದರಿಂದ ನಿಮಗೆ ಸಿಗಬೇಕಾದ ಕನಿಷ್ಠ ಮನರಂಜನೆಯೂ ಸಿಗುವುದಿಲ್ಲ. ಬೆಲೆ ಕಮ್ಮಿ ಎಂಬ ಒಂದೇ ಕಾರಣಕ್ಕೆ ಹೊಸ ಚಿತ್ರಗಳ ಸಿಡಿಯನ್ನು ಕೊಂಡುಕೊಳ್ಳಬೇಡಿ ಎಂದು ಕೆ. ಮಂಜು ಜನರಿಗೆ ಕಿವಿ ಮಾತು ಹೇಳಿದರು. ಪ್ರತಿಕಾಗೋಷ್ಠಿಯಲ್ಲಿ ನಿರ್ಮಾಪಕ ಸಾ.ರಾ.ಗೋವಿಂದು, ನಿರ್ಮಾಪಕ ಚಿನ್ನೇಗೌಡ, ನಿರ್ದೇಶಕ ನಾಗಶೇಖರ್, ಥಾಮಸ್ ಉಪಸ್ಥಿತರಿದ್ದರು.
ನಮಗೆ ನಕಲಿ ಸಿಡಿ ತಂದು ಕೊಡುವವರ ಕುಲಗೋತ್ರ ನಮಗೆ ತಿಳಿದಿರುವುದಿಲ್ಲ. ಏಜೆಂಟ್ ಗಳು ತಂದು ಕೊಡುವ ಎಲ್ಲಾ ಸಿಡಿಗಳಂತೆ ಇದನ್ನು ಮಾರುತ್ತೇವೆ. ಕ್ವಾಲಿಟಿ ಬಗ್ಗೆ ನಮಗೆ ಗೊತ್ತಿಲ್ಲ. ಈಗ ಕಂಪೆನಿಗಳೇ ಕಡಿಮೆ ಬೆಲೆಗೆ ಮಾರುತ್ತಿವೆ. ನಮ್ಮನ್ನು ಹಿಡಿದರೆ ಏನು ಪ್ರಯೋಜನ. ಇದಕ್ಕೆ ಮೂಲ ಕಾರಣರಾದವರನ್ನು ಹಿಡಿದು ವಿಚಾರಣೆ ನಡೆಸಲಿ ಎನ್ನುತ್ತಾರೆ ಬಂಧಿತ ಚನ್ನರಾಯಪಟ್ಟಣದ ಮಧು.
ಗೂಂಡಾ ಕಾಯ್ದೆ ಜಾರಿಗೆ ತನ್ನಿ : ಲಹರಿ ವೇಲು
ರಾಜ್ಯದ ಖ್ಯಾತ ಧ್ವನಿಸುರಳಿ ಸಂಸ್ಥೆ ಲಹರಿ ರೆಕಾರ್ಡಿಂಗ್ ಕಂಪೆನಿಯ ಮಾಲೀಕರಾದ ತುಲಸೀರಾಮ್ ನಾಯ್ಡು (ಲಹರಿವೇಲು) ಅವರು ಪೈರಸಿ ಹಾಗೂ ಪರಭಾಷಿಗ ಗಾಯಕ/ಕಿಯರವಿರುದ್ಧ ಆಂದೋಲನ ಶುರುಮಾಡಿದ್ದಾರೆ. ಶೇ. 20 ರಷ್ಟು ಪರಭಾಷಾ ಗಾಯಕರಿಗೆ ನಮ್ಮ ನಿರ್ಮಾಪಕರು ಮಣೆ ಹಾಕಿದ್ದರೆ ಓಕೆ. ಇಲ್ಲವಾದರೆ ಅಂತಹ ಚಿತ್ರದ ಆಡಿಯೋ ಹಕ್ಕನ್ನು ಖರೀದಿಸುವುದಿಲ್ಲ. ಇ ದು ಎಲ್ಲಾ ಬ್ಯಾನರ್ ಗಳ ಕನ್ನಡ ಚಿತ್ರಗಳಿಗೆ ಅನ್ವಯವಾಗುತ್ತದೆ. ಶೇ. 80 ರಷ್ಟು ಸ್ಥಳೀಯ ಗಾಯನ ಪ್ರತಿಭೆಗಳಿಗೆ ಅವಕಾಶ ದೊರೆಯಬೇಕು ಎಂದಿದ್ದಾರೆ.
ಉತ್ತಮ ಗುಣಮಟ್ಟದ ಸಂಗೀತವನ್ನು ನೀಡಿದರೆ ಬೆಲೆ ಎಷ್ಟಾದರೂ ಜನರು ಕೊಂಡು ಕೇಳುತ್ತಾರೆ. ಲಹರಿ ಸಿಡಿಗಳ ಬೆಲೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ಯಶಸ್ಸು ಸಾಧಿಸಿದ ತೃಪ್ತಿಯಿದೆ. ಆದರೆ, ನಕಲಿ ಸಿಡಿ ಜಾಲವನ್ನು ಹತ್ತಿಕ್ಕಲು ವಿಫಲವಾಗುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶವಿದೆ. ಆಡಿಯೋ ಸಂಸ್ಥೆಗಳು, ನಿರ್ಮಾಪಕರು ಇನ್ನೂ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವೇಲು ಹೇಳಿದರು. ಇದೇ ರೀತಿಯ ನಿರ್ಣಯ ಕೈಗೊಂಡಿರುವ ಆನಂದ್ ಆಡಿಯೋ ಸಂಸ್ಥೆ ಪೈರಸಿಜಾಲತಡೆಯಲು ಗೂಂಡಾ ಕಾಯ್ದೆ ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಬೇಕಿದೆ ಎಂದಿದೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications