ಶ್ರೀ ಶನೇಶ್ವರ ಸ್ವಾಮಿ ಕಲ್ಯಾಣದಲ್ಲಿ ಕರಿಬಸವಯ್ಯ

By Staff

ಕನ್ನಡ ಚಿತ್ರರಂಗದಲ್ಲಿ ಈಗ ಕೇವಲ ಕಮರ್ಷಿಯಲ್ ಚಿತ್ರಗಳ ವಿಜೃಂಭಣೆ. ಇಲ್ಲವಾದರೆ ಮಚ್ಚು, ಲಾಂಗು, ದೊಣ್ಣೆಗಳ ತೋರಣಗಳ ಅಡಿಯಲ್ಲಿ ರಕ್ತದ ಓಕುಳಿಯಾಡುತ್ತಿದೆ! 60-70ರ ದಶಕದಲ್ಲಿ ಕಂಡ ಕನ್ನಡ ಚಿತ್ರಗಳ ಸವಿನೆನಪು ಈಗ ಕೇವಲ ಮರೀಚಿಕೆ ಎನಿಸುವಷ್ಟು ದೂರ ದೂರ....ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುವ ಛಾಯಾಪುತ್ರ ಕಂಬೈನ್ಸ್ ಗೆಳೆಯರು ತಮ್ಮಿಂದ ಏನಾದರೂ ಈ ನಿಟ್ಟಿನಲ್ಲಿ 'ಸರಿ' ಮಾಡಲು ಸಾಧ್ಯವೇ ಎಂದು ಯೋಚಿಸಿದ್ದಾರೆ. ಪೌರಾಣಿಕ ಚಿತ್ರವನ್ನು ಭದ್ರ ಅಡಿಪಾಯದ ಆಧಾರದಲ್ಲಿ ಕಟ್ಟಲು ತಯಾರು ಮಾಡಿಕೊಂಡಿದ್ದಾರೆ.

'ಶ್ರೀ ಶನೇಶ್ವರ ಸ್ವಾಮಿ ಕಲ್ಯಾಣ' ಚಿತ್ರ ಈಗ ಮುಹೂರ್ತದ ಹಂತದಲ್ಲಿದೆ. ಆಧುನಿಕ ತಂತ್ರಜ್ಞಾನದ ಬೆಳಕಿನಡಿಯಲ್ಲಿ ಪ್ರಾಚೀನ ಕಾಲದ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಕಥಾನಕ ಹಂದರ ಹೊಂದಿರುವ ಈ ಚಿತ್ರವು ಶೀಘ್ರವೇ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ.

ಕನ್ನಡ ಚಿತ್ರರಂಗದ ಪ್ರಮುಖರ ಪೈಕಿ ಆರ್. ನಾಗೇಂದ್ರರಾವ್ ಅವರು ಸಹ ಒಬ್ಬರು. ಇವರ ಪುತ್ರರುಗಳ ಪೈಕಿ ಸಾಹಿತಿ ಆರ್.ಎನ್. ಜಯಗೋಪಾಲ್ ಮತ್ತು ಆರ್.ಎನ್. ಕೃಷ್ಣಪ್ರಸಾದ್ ಚಿತ್ರ ನಿರ್ದೇಶಕರಾಗಿ ಯಶಕಂಡವರು. ಮತ್ತೋರ್ವ ಪುತ್ರ ಆರ್.ಎನ್. ಸುದರ್ಶನ್ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿರಲಿಲ್ಲ.ಈಗ ಛಾಯಾಪುತ್ರ ಕಂಬೈನ್ಸ್ರವರ 'ಶ್ರೀ ಶನೇಶ್ವರ ಕಲ್ಯಾಣ' ಚಿತ್ರದ ನಿರ್ದೇಶನಕ್ಕೆ ಒಲವು ತೋರಿದ್ದಾರೆ.

ಇಂದಿನ ಕಾಲದಲ್ಲಿ ಭಕ್ತಿ ಉತ್ಸಾಹ ಭರಿತ ಪೌರಾಣಿಕ ಕಥೆ ಅಗತ್ಯತೆ ತುರ್ತಾಗಿ ಇದೆ. ಹೀಗಾಗಿ ನಾನು ಪೂರ್ಣ ಮನಸ್ಸಿನಿಂದ ಇದರಲ್ಲಿ ತೊಡಗಿಕೊಂಡಿದ್ದೇನೆ. ನನ್ನ ನಿರ್ದೇಶನದಲ್ಲಿ ಕನ್ನಡ ಚಿತ್ರ ರಂಗಕ್ಕೆ ಒಂದು ಉತ್ತಮ ಚಿತ್ರದ ಕಾಣಿಕೆ ದೊರಕಲಿದೆ ಎಂದು ಅವರು ಆತ್ಮವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದ್ದಾರೆ.

ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಲವು ಹಿರಿಯ ಕಲಾವಿದರು ಮತ್ತು ಕನ್ನಡ ರಂಗಭೂಮಿಯ ಪ್ರಸಿದ್ಧಕಲಾವಿದರು ಪ್ರಮುಖ ಪಾತ್ರವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದರ್ಶನ ಅವರ 'ಅಪಾರ ಕೀರ್ತಿ ಗಳಿಸಿ ಮೆರವ ಭವ್ಯ ನಾಡು......' ಹಾಡಿನ ಕಾಲದಿಂದಲೂ ಆತ್ಮೀಯರಾದ ಇಳೆಯರಾಜಾ ತಮ್ಮ ಸ್ನೇಹಿತನಿಗಾಗಿ ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕಥೆಗಾರ ಶಿವಲಿಂಗೇಗೌಡ ಈ ಚಿತ್ರಕ್ಕಾಗಿ ಕಥೆ-ಸಂಭಾಷಣೆ ಬರೆದಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ತೋಟಧರಣಿ ಕಲಾ ನಿರ್ದೇಶನ ಮಾಡಲಿದ್ದಾರೆ.

'ಶ್ರೀ ಶನೇಶ್ವರ ಸ್ವಾಮಿ ಕಲ್ಯಾಣ' ಚಿತ್ರಕ್ಕಾಗಿ ಭರ್ಜರಿ ಸೆಟ್ ಗಳು ಬೇಕಾಗಿವೆ. ಒಂದೆರಡು ದಿನಗಳ ಕಾಲ ಮಾತ್ರ ಹೊರಾಂಗಣ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ಸುದರ್ಶನ್ ಅವರು. ವಾಸ್ತವವಾಗಿ ನಾಟಕಕ್ಕಾಗಿ ರಚಿತವಾಗಿದ್ದ 'ಶ್ರೀ ಶನೇಶ್ವರ ಸ್ವಾಮಿ ಕಲ್ಯಾಣ' ಕಥಾನಕ ರಾಜ್ಯದ ಹಲವಾರು ಕಡೆ ಸಾವಿರಕ್ಕೂ ಹೆಚ್ಚು ಬಾರಿ ರಂಗದ ಮೇಲೆ ಪ್ರದರ್ಶಿತವಾಗಿದೆ. ಈಗ ಇದು ಬೆಳ್ಳಿ ತೆರೆ ಮೇಲೆ ರಾರಾಜಿಸಲು ಸಿದ್ಧವಾಗುತ್ತಿದೆ.

ಸುದರ್ಶನ್ ಅವರ ಪತ್ನಿ ಕಲಾವಿದೆ ಶೈಲಶ್ರೀ ಅವರು ತಮ್ಮ ನೃತ್ಯ ಪ್ರತಿಭೆಯನ್ನು ಈ ಚಿತ್ರಕ್ಕೆ ಧಾರೆ ಎರೆಯಲಿದ್ದಾರೆ. ನೃತ್ಯ ನಿರ್ದೇಶನದೊಂದಿಗೆ ಪ್ರಮುಖ ಪಾತ್ರ ಒಂದರಲ್ಲಿ ಸಹ ಅವರು ಕಾಣಿಸಿಕೊಳ್ಳಲಿದ್ದಾರೆ. ನಾಲ್ಕು ಹಾಡುಗಳು ಚಿತ್ರದಲ್ಲಿ ಬಳಕೆಯಾಗುತ್ತಿದ್ದು ತಮ್ಮ ಸಹೋದರ ಆರ್.ಎನ್. ಜಯಗೋಪಾಲ್ ಅವರ ಹೆಸರಿನ ಪ್ರಶಸ್ತಿ ಪಡೆದ ಸಿ.ವಿ. ಶಿವಶಂಕರ್ ಹಾಗೂ ಕವಿರಾಜ್ ಅವರ ಪ್ರತಿಭೆಯನ್ನು ಬಳಸಿಕೊಳ್ಳಲಿದ್ದಾರೆ. ಜೊತೆಗೆ, ವಿ. ಮನೋಹರ್ ಸಹ ಗೀತ ರಚನೆ ಮಾಡಲಿದ್ದಾರೆ.

'ಶ್ರೀ ಶನೇಶ್ವರ ಸ್ವಾಮಿ ಕಲ್ಯಾಣ' ಚಿತ್ರದ ಪ್ರಮುಖ ಪಾತ್ರವಾದ ಶನೇಶ್ವರನ ಪಾತ್ರವನ್ನು ನಟ ಕರಿಬಸವಯ್ಯ ನಿರ್ವಹಿಸುತ್ತಿದ್ದಾರೆ. ರಂಗಭೂಮಿ ಕಲಾವಿದೆ ಹಾಗೂ ಶೈಲಶ್ರೀ ಅವರ ನೃತ್ಯ ಶಿಷ್ಯೆ ರಾಜೇಶ್ವರಿ ಹಾಗೂ ಜಗದೀಶ್ ಸೇರಿದಂತೆ ಇತರ ಪ್ರಮುಖರು ಈ ಚಿತ್ರ ಪಾರ್ತವರ್ಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X