‘ಶಂಕರಾಭರಣಂ’ ಸೋಮಯಾಜುಲು ವಿಧಿವಶ
ಹೈದರಬಾದ್ : ಭಾರತದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದಾದ 'ಶಂಕರಾಭರಣಂ" ತೆಲುಗು ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ಜೆ.ವಿ. ಸೋಮಯಾಜುಲು ಮಂಗಳವಾರ (ಏ.27) ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು . ಪತ್ನಿ , ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಸೋಮಯಾಜಲು ಅಗಲಿದ್ದಾರೆ.
ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗಿನ ಸುಮಾರು 150 ಚಿತ್ರಗಳಲ್ಲಿ ಸೋಮಯಾಜುಲು ಅಭಿನಯಿಸಿದ್ದಾರೆ. ಮೂಲತಃ ರಂಗಕಲಾವಿದರಾಗಿದ್ದ ಸೋಮಯಾಜುಲು- ಕೆ.ವಿಶ್ವನಾಥ್ ನಿರ್ದೇಶನದ 'ಶಂಕರಾಭರಣಂ" ಚಿತ್ರದ ಶಂಕರಶಾಸ್ತ್ರಿ ಪಾತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
1980 ರಲ್ಲಿ ಚಿತ್ರರಂಗ ಪ್ರವೇಶಿಸಿದ ಸೋಮಯಾಜುಲು, ಚಿತ್ರರಂಗ ಪ್ರವೇಶಿಸುವ ಮುನ್ನ ಸುಮಾರು ನಾಲ್ಕು ದಶಕಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ತೆಲುಗು ವಿಶ್ವವಿದ್ಯಾಲಯದಲ್ಲಿ ರಂಗಕಲೆ ವಿಭಾಗದ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
ಗುರುಜಾದ ಅಪ್ಪರಾವ್ ಅವರ ಶ್ರೇಷ್ಠ ಕೃತಿ 'ಕನ್ಯಾಶುಲ್ಕ" ನಾಟಕದಲ್ಲಿ ಸೋಮಯಾಜುಲು ನಿರ್ವಹಿಸಿದ್ದ ರಾಮಪ್ಪ ಪಂತುಲು ಪಾತ್ರ ಅವರಿಗೆ ಆಂಧ್ರಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು .


Click it and Unblock the Notifications