ಗಂಗರಾಜು ನಿದ್ದೆ ಕೆಡಿಸಿರುವ ಶಿವಾಜಿ ನಕಲಿ ಸಿ.ಡಿ. ದಂಧೆ
ಬೆಂಗಳೂರು : ಪೈರಸಿ ಬಗ್ಗೆ ಗಾಂಧಿನಗರದಲ್ಲಿ ಮತ್ತೆ ಮಾತು ಕೇಳಿಬರುತ್ತಿದೆ. ಈ ಮಾತಿಗೆ ದಾರಿ ಮಾಡಿರುವುದು ರಜನೀಕಾಂತ್ ಅಭಿನಯದತಮಿಳಿನ ಶಿವಾಜಿ ಚಿತ್ರ. ಈ ಚಿತ್ರದ ನಕಲಿ ಸಿ.ಡಿ ಮಾರಾಟ ಕಂಡು, ಕರ್ನಾಟಕದ ವಿತರಕ ಹೆಚ್.ಡಿ.ಗಂಗರಾಜು ಕಂಗೆಟ್ಟಿದ್ದಾರೆ.
ಕೋಟ್ಯಂತರ ಹಣ ಸುರಿದು, ಹಕ್ಕುಗಳನ್ನು ಖರೀದಿಸಿದ್ದೇನೆ. ನಕಲಿ ಸಿ.ಡಿ ಗಳಿಂದ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂಬುದು ಅವರ ನೋವು. ಈ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಭೂಗತ ಗ್ಯಾಂಗುಗಳು ವ್ಯವಸ್ಥಿತವಾಗಿ ಎಲ್ಲ ಭಾಷೆಗಳ ಚಲನಚಿತ್ರಗಳನ್ನು ನಕಲು ಮಾಡುತ್ತಿವೆ ಎಂದು ಆರೋಪಿಸಿದ ಗಂಗರಾಜು, ಇಂತಹ ಚಟುವಟಿಕೆಗಳಲ್ಲಿ ತೊಡಗುವವರನ್ನು ಬಂಧಿಸಲು ಸರ್ಕಾರ ಗೂಂಡಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಪಡಿಸಿದರು.
ಈ ಕಾಯ್ದೆ ಈಗಾಗಲೇ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ ರಾಜ್ಯದಲ್ಲಿನ್ನೂ ಅಧಿಸೂಚನೆ ಹೊರಡಿಸಬೇಕಿದೆ ಎಂದು ಅವರು ಹೇಳಿದರು.
ಶಿವಾಜಿ ಚಿತ್ರಪ್ರದರ್ಶನ ಹೇಗೆ ನಡೆದಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರೇಕ್ಷಕರು ಚಿತ್ರವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ, ಚಿತ್ರ ಹಣಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಲಿದೆ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications