ಅಪ್ಪನಿಗೆ ತಕ್ಕಮಗನ ‘ಸಾರ್ವಭೌಮ’

ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತಿದು ; ಶಿವರಾಜ್ಕುಮಾರ್ ನಾಯಕರಾಗಿ ನಟಿಸಿರುವ 'ಸಾರ್ವಭೌಮ" ಚಿತ್ರದ ಬಗ್ಗೆ ಅಭಿಮಾನಿಗಳ ಅಭಿಮಾನದ ನುಡಿಯಿದು.
'ಸಾರ್ವಭೌಮ" ಚಿತ್ರದ ಬಗ್ಗೆ ಕಟ್ಟಾ ಅಭಿಮಾನಿಗಳಿರಲಿ, ಗಾಂಧಿನಗರದ ಪಕ್ಕಾ ವ್ಯವಹಾರಸ್ಥರೂ ಆಶಾಭಾವನೆ ಹೊಂದಿದ್ದಾರೆ. ಶಿವರಾಜ್ ಪತ್ನಿ ಗೀತಾ ಕೂಡ 'ಸಾರ್ವಭೌಮ" ಚಿತ್ರದ ಬಗ್ಗೆ ವಿಪರೀತ ಮೋಹ ಹೊಂದಿದ್ದಾರೆ. ಹಂಸಲೇಖಾ ಸಂಗೀತ-ಸಾಹಿತ್ಯದ ಬಗೆಗೂ ಒಳ್ಳೆಯ ಮಾತುಗಳಿವೆ.
ಸಾಮಾನ್ಯವಾಗಿ ಗಂಡನ ಚಿತ್ರಗಳ ಬಗ್ಗೆ ಹೆಚ್ಚು ಮಾತಾಡದ ಈ ಹೆಣ್ಣುಮಗಳು 'ಸಾರ್ವಭೌಮ" ಚಿತ್ರದ ಬಗ್ಗೆ ಮಾತ್ರ ಖುಷಿಯಿಂದ ಮಾತಾಡುತ್ತಾರೆ. ಇದಕ್ಕೆ ಸಾಕ್ಷಿ , ನಿರ್ದೇಶಕ ಮಹೇಶ್ ಸುಖಧರೆ ಅವರೊಂದಿಗಿನ 20 ನಿಮಿಷಗಳ ದೂರವಾಣಿ ಸಂಭಾಷಣೆ. ಸುಖಧರೆಗೆ ಪ್ರಶಂಸೆಯ ಸುರಿಮಳೆ !
ಶಿವಣ್ಣನ ವೃತ್ತಿಜೀವನದಲ್ಲಿ 'ಸಾರ್ವಭೌಮ" ಒಂದು ಮೈಲಿಗಲ್ಲು ಎನ್ನುತ್ತಾರೆ ಸುಖಧರೆ. ಆಕಸ್ಮಿಕ ಘಟನೆಯಾಂದರಲ್ಲಿ ಪಾಕಿಸ್ತಾನದ ಜೈಲು ಸೇರುವ ಭಾರತೀಯನೊಬ್ಬ , ಜೈಲಿನಲ್ಲಿ ತನ್ನ ಯೌವನ ಕಳಕೊಂಡು ವಾಪಸ್ಸಾಗುವುದು, ಆನಂತರದ ಘಟನೆಗಳೇ 'ಸಾರ್ವಭೌಮ" ಚಿತ್ರದ ಕಥಾನಕ. ಈ ಚಿತ್ರದಲ್ಲಿ ಯುವಕ ಹಾಗೂ ಮುದುಕನ ಪಾತ್ರವನ್ನು ಶಿವರಾಜ್ ಪೋಷಿಸಿದ್ದಾರೆ.
'ಸೈನಿಕ" ಚಿತ್ರದ ನಂತರ ನಿರ್ದೇಶಿಸಿರುವ 'ಸಾರ್ವಭೌಮ" ಚಿತ್ರಕ್ಕಾಗಿ ಸುಖಧರೆ ಇನ್ನಿಲ್ಲದ ಕಷ್ಟ ಪಟ್ಟಿದ್ದಾರೆ. ಚಿತ್ರೀಕರಣದ ಲೊಕೇಷನ್ನಿಂದ ಹಿಡಿದು ಸಂಕಲನದ ಮನೆಯವರೆಗೂ ಆಸ್ಥೆಯಿಂದ ಓಡಾಡಿದ್ದಾರೆ. ವಾರಗಟ್ಟಲೆ ಪಟ್ಟಾಗಿ ಕೂತು ಚಿತ್ರಕಥೆ ತಿದ್ದಿ ತೀಡಿದ್ದಾರೆ. ಹಾಗಾಗಿ 'ಸಾರ್ವಭೌಮ" ಚಿತ್ರದ ಬಗ್ಗೆ ಸುಖಧರೆಗೆ ಪುತ್ರವಾತ್ಸಲ್ಯ.
ಶಿವರಾಜ್ಗೆ ಕೂಡ 'ಸಾರ್ವಭೌಮ" ಚಿತ್ರದ ಬಗ್ಗೆ ವಿಪರೀತ ನಿರೀಕ್ಷೆಯಿದೆ. ಬಹು ನಿರೀಕ್ಷೆಯ ಚಿಗುರಿದ ಕನಸು ಸೋತ ಕಾರಣ, 'ಸಾರ್ವಭೌಮ" ಮೂಲಕವಾದರೂ ಯಶಸ್ಸು ಒಲಿದೀತಾ ಎಂಬುದು ಶಿವರಾಜ್ ನಿರೀಕ್ಷೆ .
'ಸಾರ್ವಭೌಮ" ಚಿತ್ರ ಈಮುನ್ನವೇ ಬಿಡುಗಡೆಯಾಗಬೇಕಿತ್ತು . ಲವ್, ಕಂಠಿ ಚಿತ್ರಗಳೊಂದಿಗೆ 'ಸಾರ್ವಭೌಮ" ಕೂಡಾ ಬಿಡುಗಡೆಯ ಹಾದಿಯಲ್ಲಿತ್ತು . ಆದರೆ, ವಿನಾಕಾರಣ ಸ್ಪರ್ಧೆ ಬೇಡ ಎನ್ನುವ ಕಾರಣದಿಂದ 'ಸಾರ್ವಭೌಮ" ಸ್ವಲ್ಪ ತಡವಾಗಿ ಬಂದಿದ್ದಾನೆ. ಗೆಲ್ಲುವ ವಿಶ್ವಾಸ ಮಾತ್ರ ಕೊಂಚವೂ ಕುಂದಿಲ್ಲ .


Click it and Unblock the Notifications