ಅಣ್ಣಾವ್ರು ಬರೆಯೋ ಪುಸ್ತಕಕ್ಕೆ ಯಾವ ಹೆಸರಿಡಬಹುದು?
ಇಂಥವರ ನರ ಕತ್ತರಿಸಬೇಕು"!ಅಣ್ಣಾವ್ರ ದನಿಯಲ್ಲಿ ಅವುಡುಗಚ್ಚಿ ಅನುಭವಿಸಿದ್ದ ನೋವಿನ ಎಳೆಗಳಿದ್ದವು. ಕೊಚ್ಚಿಹಾಕಬೇಕೆಂಬ ಕಿಚ್ಚಿತ್ತು. ಆದರೆ ಸದಾ ಕಾಡುವ ಸುತ್ತಲ ರಕ್ಷಣಾ ಪರದೆ ಅವರನ್ನು ಕಟ್ಟಿ ಹಾಕಿರುವ ವಾಸ್ತವತೆಯೂ ಇಣುಕುತ್ತಿತ್ತು.
'ಮಾಜಿ ಸಚಿವ ನಾಗಪ್ಪನನ್ನು ಬಿಡುಗಡೆ ಮಾಡಪ್ಪ" ಅಂತ ವೀರಪ್ಪನ್ಗೆ ರೇಡಿಯೋ ಸಂದೇಶ ಕಳಿಸುವುದಾಗಿ ಖುಲ್ಲಂ ಖುಲ್ಲಂ ಪತ್ರಕರ್ತರ ಮುಂದೆ ಹೇಳಿದ ವರನಟ, ಎರಡು ವರ್ಷಗಳ ಹಿಂದೆ ವೀರಪ್ಪನ್ ಕಪಿಮುಷ್ಟಿಯಲ್ಲಿ ತಾವು ಪಟ್ಟ ಪಡಿಪಾಟಲನ್ನು ಬಿಚ್ಚಿಟ್ಟಿದ್ದೂ ಹಾಸ್ಯದ ಲೇಪದೊಂದಿಗೇ. ಕೆಲವು ಸ್ಯಾಂಪಲ್ಗಳು ನಿಮ್ಮ ಪಾಲಿಗೆ...
- ನನ್ನ ಜೊತೆ ಬನ್ನಿ. ನಮ್ಮ ಸಚಿವರು, ಶಾಸಕರು ಎಲ್ಲರೂ ನನಗೆ ಬೇಕಾದವರು. ನಿಮಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಅಂತ ಒಮ್ಮೆ ವೀರಪ್ಪನ್ಗೆ ಹೇಳಿದೆ. ಉಪಾಯವಾಗಿ ಆತನನ್ನು ಇಲ್ಲಿಗೆ ಕರಕೊಂಡು ಬರೋದು ನನ್ನ ಉದ್ದೇಶವಾಗಿತ್ತು. ಆದರೆ ಆತ ಬಲು ಹಟವಾದಿ. 'ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ" ಅಂತ ಏರಿದ ದನಿಯಲ್ಲಿ ಹೇಳಿದ. ನಾನೂ ಹೋಗಲಿ ಬಿಡೀಂತ ಜೋರಾಗೇ ಹೇಳಿದೆ. ಆಮೇಲೆ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡು ನಗಾಡಿದೆವು !
- ವೀರಪ್ಪನ್ ಜೊತೆ ನಾನು ಹೆಚ್ಚು ಮಾತಾಡುತ್ತಿರಲಿಲ್ಲ. ಆತನ ಸಿಬ್ಬಂದಿ ಹೆಚ್ಚು ಸ್ನೇಹಿತರಾಗಿದ್ದರು. ಒಮ್ಮೆ ಬಂದೂಕು ನೋಡಿ, ನಾನೇನೂ ನಿಮ್ಮ ಬಂದೂಕಿಗೆ ಹೆದರೋದಿಲ್ಲ. ಗುಂಡು ಹಾರಿಸಿದರೆ ಕ್ಷಣದಲ್ಲೇ ಪ್ರಾಣ ಹೋಗುತ್ತೆ, ಅದಕ್ಯಾಕೆ ಚಿಂತೆ ಅಂತ ತಮಾಷೆ ಮಾಡಿದೆ. ಅದನ್ನು ಕೇಳಿಸಿಕೊಂಡು ಬಂದ ವೀರಪ್ಪನ್, 'ನಮ್ಮ ಕೆಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಆಮೇಲೆ ನಾನೇ ನಿಮ್ಮನ್ನ ಕರೆದುಕೊಂಡು ಹೋಗಿ ಬಿಡ್ತೀನಿ" ಅಂದ.
ರಾಜ್ ಬಳಿ ಇಂಥಾ ಯಾರಿಗೂ ದಕ್ಕದ ಅನುಭವಗಳ ಮಹಾಪೂರವೇ ಇದೆ. ಅದನ್ನೆಲ್ಲಾ ಪುಸ್ತಕವಾಗಿಸುವ ಮನಸ್ಸನ್ನೂ ಅವರು ಮಾಡಿದ್ದಾರೆ. ವಿಜಯ ಚಿತ್ರ ನಿಯತಕಾಲಿಕದಲ್ಲಿ ಅವರ ಆತ್ಮ ಕಥನ- ಕಥಾನಾಯಕನ ಕಥೆ ಪ್ರಕಟವಾಗಿತ್ತು. ಈಗ 108 ದಿನಗಳ ತಮ್ಮ ಕಾಡಿನ ಅನುಭವವನ್ನೂ ಪುಸ್ತಕವಾಗಿಸುವ (ಆತ್ಮ ಚರಿತ್ರೆ-2) ಇರಾದೆ ಅಣ್ಣಾವ್ರಿಗೆ ಇದೆ. ಅದು ಬೇಗ ಹೊರ ಬರಲಿ.
English summary
Rajkumar to write a book on his Vanavasa


Click it and Unblock the Notifications