ಮಲಗಿದವರ ಮೇಲೆ ಸಲ್ಮಾನ್ಖಾನ್ ಕಾರು, ಬೇಕರಿ ಕಾರ್ಮಿಕನ ಸಾವು
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾನೆ. ಈ ಬಾರಿ ಮುಂಬೈನ ಬಾಂದ್ರಾದಲ್ಲಿನ ಬೇಕರಿಯ ಮುಂದೆ ಮಲಗಿದ್ದ ಜನರ ಮೇಲೆ ಕಾರನ್ನು ಚಲಾಯಿಸಿ ಒಬ್ಬನ ಪ್ರಾಣ ತೆಗೆಯುವ ಹಾಗೂ ಇನ್ನಿತರ ಮೂವರನ್ನು ಗಾಯಗೊಳಿಸುವ ಮೂಲಕ ಸುದ್ದಿಮಾಡಿದ್ದಾನೆ.
ಬೇಕರಿ ಕಾರ್ಮಿಕ ನೂರಲ್ಲಾ ಖಾನ್ (38) ಸಲ್ಮಾನ್ ಕಾರಿಗೆ ಸಿಕ್ಕಿ ಸಾವಿಗೀಡಾದ ನತದೃಷ್ಟ ಎಂದು ಗುರುತಿಸಲಾಗಿದೆ. ಉಳಿದ ಮೂವರು ಗಾಯಾಳುಗಳನ್ನು ಬಾಂದ್ರಾದಲ್ಲಿನ ಬಾಭಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬನನ್ನು ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಗಿದೆ.
ಶನಿವಾರ (ಸೆ.28) ಮುಂಜಾನೆ 3 ಗಂಟೆಯ ಸುಮಾರಿಗೆ ಸಲ್ಮಾನ್ ತನ್ನ ಸಂಗೀತಗಾರ ಗೆಳೆಯ ಕಮಾಲ್ ಖಾನ್ ಹಾಗೂ ಅಂಗರಕ್ಷಕ ರವೀಂದ್ರ ಪಾಟೀಲ್ ಸಹಿತ ಟಯೋಟ ಲ್ಯಾಂಡ್ ಕ್ರುಸರ್ ಕಾರನ್ನು ಮಾರಿಯಾಟ್ ಹೊಟೆಲಿನಿಂದ ಹಿಲ್ ರಸ್ತೆಯ ಅಮೇರಿಕನ್ ಬೇಕರಿಯ ಮುಖಾಂತರ ಮನೆಗೆ ಹೋಗುವಾಗ ಈ ಅವಘಡ ಸಂಭವಿಸಿದೆ. ಅಪಘಾತ ನಡೆದ ಕೂಡಲೇ ಸಲ್ಮಾನ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಅಂಗರಕ್ಷಕ ಪಾಟೀಲ್ ದೂರು ನೀಡಿದ್ದ.
ಅಪಘಾತದ ಸಂಬಂಧವಾಗಿ ಪೊಲೀಸರು ಸಲ್ಮಾನ್ ಮನೆಗೆ ಹೋದಾಗ ಆತ ಹಿಂಬಾಗಿಲಿನಿಂದ ಓಡಿಹೋಗಿದ್ದಾಗಿ ವರದಿಯಾಗಿದೆ. ಆನಂತರ ನ್ಯಾಯವಾದಿ ಜಮೀರ್ ಖಾನ್ ಜತೆಯಲ್ಲಿ ಬಂದ ಸಲ್ಮಾನ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶರಣಾಗತರಾಗಿದ್ದಾರೆ.
ವೈದ್ಯಕೀಯ ಪರೀಕ್ಷೆಯ ನಂತರ ಸಲ್ಮಾನ್ ಖಾನ್ರನ್ನು ಪೊಲೀಸರು ಬಾಂದ್ರಾ ಕೋರ್ಟಿನ ಮುಂದೆ ಯದ್ವಾ-ತದ್ವಾ ಕಾರು ಚಲಾಯಿಸಿದ ಪ್ರಕರಣಕ್ಕಾಗಿ ಹಾಜರು ಪಡಿಸಲಾಗಿದ್ದು, ಸಲ್ಮಾನ್ಗೆ ಜಾಮೀನು ಸಿಕ್ಕಿದೆ.(ಏಜೆನ್ಸೀಸ್)


Click it and Unblock the Notifications