‘ಲಗಾನ್’ ಗಿಟ್ಟಿಸಿಕೊಳ್ಳಲಾಗದ್ದು ಸಂಜಯ್ ಲೀಲಾ ಬನ್ಸಾಲಿಗೆ ದಕ್ಕುತ್ತದಾ?
ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶೀ ಭಾಷಾ ಚಿತ್ರದ ವಿಭಾಗಕ್ಕೆ ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಚಿತ್ರ ಎಂಟ್ರಿ ಪಡೆದಿದೆ.
ಐಶ್ವರ್ಯ ರೈ, ಮಾಧುರಿ ದೀಕ್ಷಿತ್ ಹಾಗೂ ಶಾರುಖ್ ಖಾನ್ ನಟಿಸಿರುವ ಈ ಚಿತ್ರದಲ್ಲಿ ಪ್ರೀತಿಯಿದೆ, ಸುರದ ನಶೆಯಿದೆ, ದ್ವೇಷದ ಅಲೆಯಿದೆ, ವಿಷಾದದ ಅಭಿವ್ಯಕ್ತಿಯಿದೆ. ಬೆಂಗಾಲಿ ಕಾದರಂಬರಿಕಾರ ಶರತ್ಚಂದ್ರ ಚಟರ್ಜಿಯ ಕಾದಂಬರಿಯ ವಸ್ತು ಆಧರಿಸಿದ ಈ ಚಿತ್ರ ಭಾರೀ ಸೆಟ್ಗಳಿಂದ ಜನಮನ ಗೆದ್ದಿದೆ.
ಕಭಿ ಖುಷಿ ಕಭಿ ಗಮ್, ದಿ ಲೆಜೆಂಡ್ ಆಫ್ ಭಗತ್ಸಿಂಗ್, ಅಗ್ನಿವರ್ಷ, ಕಣ್ಣತ್ತಿಲ್ ಮುತ್ತಮಿತ್ತಾಲ್, ಉಪಾಖ್ಯನ್, ಮಂಡ ಮೇಯರ್ ಹಾಗೂ ಸಾಂಝ್ಬತಿರ್ ರೂಪ್ಕತಾರಾ- ಈ ಚಿತ್ರಗಳೂ ಆಸ್ಕರ್ ಆಯ್ಕೆಯ ಸ್ಪರ್ಧಾ ಪಟ್ಟಿಯಲ್ಲಿದ್ದವು. ಆದರೆ ಆಯ್ಕೆ ಸಮಿತಿ ಇವುಗಳನ್ನೆಲ್ಲಾ ಪರಿಶೀಲಿಸಿ, ದೇವದಾಸ್ ಚಿತ್ರವನ್ನು ಆಯ್ಕೆ ಮಾಡಿತು.
ಕೆಲವರು 'ದೇವದಾಸ್" ಚಿತ್ರವನ್ನು ತೀರಾ ಶಬ್ದದ, ಅತಿರೇಕದ ಮೆಲೋಡ್ರಾಮಾ ಎಂದು ತರಾಟೆಗೆ ತೆಗೆದುಕೊಂಡಿದದೂ ಉಂಟು. ಆದರೆ ಒಂದು ಒಳ್ಳೆಯ ವಸ್ತುವಿಗೆ ಚೆಂದದ ಬಣ್ಣ ಕೊಟ್ಟು, ಹೊಸ ಅರ್ಥ ದಕ್ಕಿಸಿಕೊಂಡ ಪೂರ್ಣ ಸಮಾಧಾನ ನನಗಿದೆ. ಈ ಚಿತ್ರ ಆಸ್ಕರ್ ಪ್ರಶಸ್ತಿಯ ಕಣದಲ್ಲಿ ಭಾರತವನ್ನು ಪ್ರತಿನಿಧಿಸಲಿರುವುದು ತುಂಬಾ ಸಂತೋಷ ತಂದಿದೆ ಎಂದು ಸಂಜಯ್ ಲೀಲಾ ಬನ್ಸಾಲಿ ಪ್ರತಿಕ್ರಿಯಿಸಿದರು.
ಅಂದಹಾಗೆ, ಸಂಜಯ್ ಆಸ್ಕರ್ಗಾಗಿ ಲಾಬಿ ಮಾಡುವ ಹಾಗೂ ಅನುಸರಿಸಬೇಕಾದ ಕಾರ್ಯತಂತ್ರ ತಿಳಿಯುವ ಸಲುವಾಗಿ ಅಮೀರ್ ಖಾನ್ ಹಾಗೂ ಆಶುತೋಷ್ ಗೌರೀಕರ್ ಅವರನ್ನು ಭೇಟಿಯಾಗಲಿದ್ದಾರೆ. ಕಳೆದ ಬಾರಿ ಆಸ್ಕರ್ ಪ್ರಶಸ್ತಿಗೆ ತೀರಾ ಹತ್ತಿರವಾಗಿದ್ದ ಲಗಾನ್ ಚಿತ್ರ, ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ವಿಫಲವಾಗಿತ್ತು.(ಇನ್ಫೋ ವಾರ್ತೆ)


Click it and Unblock the Notifications