ಡಾನ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಲನ್ಗಳಾದ ಪ್ರೇಕ್ಷಕರು !
ಒಂದೆಡೆ ಹೆಜ್ಜೇನಿನ ಕಾಟ, ಇನ್ನೊಂದೆಡೆ ಭಜರಂಗ ದಳದ ಭಕ್ತರ ಕಾಟವೋ ಕಾಟ! ಶಿವಣ್ಣ ಸುಸ್ತೋ ಸುಸ್ತು . ಹುಟ್ಟುಗೆಟ್ಟ ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ವಾಹನದೊಳಗೆ ತೂರಿಕೊಂಡರೆ, ರೊಚ್ಚಿಗೆದ್ದ ಭಜರಂಗ ದಳದ ಸದಸ್ಯರು ಹುಚ್ಚಾಪಟ್ಟೆ ಕಲ್ಲು ತೂರಿದರು.
ಅದು ಸೀತಾಳಯ್ಯನಯ್ಯನ ಗಿರಿ. ದತ್ತಪೀಠದ ಸಮೀಪವೇ ಇದೆ. ಅಲ್ಲಿ ಅ.27 ರ ಭಾನುವಾರ ಶಿವರಾಜ್ಕುಮಾರ್ ಅಭಿನಯದ 'ಡಾನ್" ಚಿತ್ರದ ಚಿತ್ರೀಕರಣ. ದತ್ತಪೀಠಕ್ಕೆ ಆಗಮಿಸಿದ್ದ ಭಕ್ತರಿಗೆ, ದೇವರ ದರ್ಶನದೊಂದಿಗೆ ಮೆಚ್ಚಿನ ನಾಯಕನ ದರ್ಶನದ ಬೋನಸ್. ಅಭಿಮಾನಿಗಳು ಮುತ್ತಿಕೊಂಡರು. ಇದೇ ವೇಳೆಯಲ್ಲಿ ಕಿಡಿಗೇಡಿಗಳು ಎಸೆದ ಕಲ್ಲಿಗೆ ಶಾಂತವಾಗಿದ್ದ ಜೇನುಹುಟ್ಟು ರೊಚ್ಚಿಗೆದ್ದಿತು.
ಜೇನುಹುಳುಗಳು ಚೆಲ್ಲಾಪಿಲ್ಲಿಯಾಗಿ ಹಾರುತ್ತಿದ್ದಂತೆ ಗಾಬರಿಯಾದ ಶಿವಣ್ಣ ಕಾರಿನೊಳಗೆ ತೂರಿಕೊಂಡರು. ಶಿವಣ್ಣ ಬೈದರು, ಶಿವಣ್ಣ ತಮಿಳು ಬಳಸಿದರು- ಆದದ್ದು ಏನೋ.. ದತ್ತಭಕ್ತರು ಜೇನಿನಂತೆಯೇ ರೊಚ್ಚಿಗೆದ್ದರು. ಕಲ್ಲು ತೂರಿದರು ; ವಾಹನಗಳ ಗಾಜುಗಳು ಪೀಸ್ ಪೀಸ್.
ಇದ್ದದ್ದು ಕೆಲವೇ ಪೊಲೀಸರು. ಆದರೂ ಲಾಠಿ ಚಲಾಯಿಸಿ ಭಕ್ತರನ್ನು ಹದ್ದಿಗೆ ತಂದರು. ಪೊಲೀಸ್ ರಕ್ಷಣೆಯಲ್ಲೇ ಶಿವರಾಜ್ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಆದರೆ ಜೇನು ಕಡಿತಕ್ಕೆ ತುತ್ತಾದ ಐವರು ಸಹ ನಟಿಯರು ಆಸ್ಪತ್ರೆ ಸೇರಿದ್ದಾರೆ. ಕಲ್ಲು ತೂರಾಟದಲ್ಲಿ ಎರಡು ಕಾರು, ಒಂದು ಬಸ್ಸು ಹಾಗೂ ಚಿತ್ರೀಕರಣ ತಂಡದ ಸಲಕರಣೆಗಳು ಹಾನಿಗೊಳಗಾಗಿವೆ. ಇಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ.


Click it and Unblock the Notifications