Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ಸ್ವಲ್ಪ ಗಂಭೀರವಾಗಿ ಕೂತು ಈ ಪತ್ರ ಓದು ಪ್ಲೀಸ್..
ರಮ್ಯಾ ಮೇಡಂಗೆ ನಮಸ್ಕಾರ.
ಹುಟ್ಟುಹಬ್ಬದ ಸಂಭ್ರಮ(ನ.29)ದಲ್ಲಿರುವ ನಿಮಗೆ ಮೊದಲು ಶುಭಾಶಯಗಳು. ನೀವು ಚೆನ್ನಾಗಿರಬೇಕು.. ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕು... ಇದು ನನ್ನೊಬ್ಬನ ಆಶಯ ಮಾತ್ರವಲ್ಲ. ನನ್ನಂಥ ಲಕ್ಷಾಂತರ ಕನ್ನಡ ಪ್ರೇಮಿಗಳ ಆಶಯ. ಜನ್ಮದಿನದ ಖುಷಿಯಲ್ಲಿರುವ ನಿಮಗೆ ಒಂದಷ್ಟು ಕಹಿಗುಳಿಗೆ ಸಹಾ ನೀಡುತ್ತಿದ್ದೇನೆ. ಕಹಿಗುಳಿಗೆಗಳು ಆರೋಗ್ಯಕ್ಕೆ ಹಿತಕರ ಅನ್ನೋದು ನಿಮಗೆ ಗೊತ್ತಿದೆ ಎನ್ನುವುದು ನನ್ನ ಭಾವನೆ. ಈ ಮಾತು ಕೇಳಿ ನೀವು ಎಂದಿನ ಸ್ಟೈಲಲ್ಲಿ ನಗ್ತೀರಾ ಅನ್ನೋದು ನನಗೆ ಗೊತ್ತಿದೆ.
ಕನ್ನಡ ಚಿತ್ರರಂಗದಲ್ಲಿ ನಂ.1ಸ್ಥಾನದಲ್ಲಿ ಮೆರೆದವರು ಮಾಲಾಶ್ರೀ. ಅವರ ನಂತರ ಆ ಸ್ಥಾನ ತುಂಬಲು ಯಾರು ಬರಲೇ ಇಲ್ಲ. ನೀವು ಆ ಸ್ಧಾನ ತುಂಬುವಿರಿ ಎಂಬ ವಿಶ್ವಾಸ ನಮಗಿತ್ತು. ಆಗತ್ಯಕ್ಕಿಂತ ಜಾಸ್ತಿಯೇ ನಾವು ನಿಮ್ಮನ್ನು ಒಪ್ಪಿಕೊಂಡೆವು. ನಿಮ್ಮ ತರ್ಲೆ ಕಿರಿಕಿರಿ ಏನೇ ಇರಲಿ.. ಎಲ್ಲರಲ್ಲೂ ಇವಳು ನಮ್ಮುಡುಗಿ ಅನ್ನೋ ಭಾವ. ಸುಂಟರಗಾಳಿ ಚಿತ್ರದಲ್ಲಿ ರಕ್ಷಿತಾ ಕುಣಿದ ಪರಿ ನೋಡಿ,'ನಾನಂತೂ ಆ ಥರಾ ಪಾತ್ರಗಳಲ್ಲಿ ಅಭಿನಯಿಸೋದಿಲ್ಲ. ಅವ್ಳು ಒಳ್ಳೆ ಕ್ಲಬ್ ಡ್ಯಾನ್ಸರ್ ಥರಾ ಕುಣಿದಿದ್ದಾಳೆ'ಎಂದು ನೀವು ಹೇಳಿದ್ದು ನಮಗಿನ್ನೂ ನೆನಪಿದೆ. ನನಗೆ ಅಂಥಾ ದೃಶ್ಯದಲ್ಲಿ ಕಾಣಿಸಿಕೊಳ್ಳೋದು ಇಷ್ಟವಿಲ್ಲ. ನನಗೆ ನಿಜಕ್ಕೂ ಹಿಂಸೆಯಾಗುತ್ತೆ ಎಂದು ನೀವು ಹೇಳಿದ ಕೆಲವೇ ದಿನಗಳಲ್ಲಿ ತೆರೆ ಮೇಲೆ ಜೂಲಿ ಚಿತ್ರ ಬಂತು. ಜೂಲಿ ಚಿತ್ರ ಹೇಗಿತ್ತು ಅನ್ನೋದು ನಿಮಗೂ ಗೊತ್ತು. ಜೂಲಿ ಚಿತ್ರದಲ್ಲಿ ನಿಮ್ಮ ಅವತಾರಾ ಕಂಡು ರಕ್ಷಿತಾ ಸಹಾ ನಾಚಿಕೊಂಡರು! ಯಾಕೆ ಹೀಗೆ?
ಸುದೀಪ್ ಗೆ ಅಪ್ಪಿಕೊಳ್ಳೋದಕ್ಕೆ ಬರೋದಿಲ್ಲ... ಆದಿತ್ಯನಿಗೆ ಕಿಸ್ ಮಾಡೋದಿಕ್ಕೆ ಬರೋದಿಲ್ಲ ಎಂದೆಲ್ಲ ನೀವು ಹೇಳಿದಿರಿ ಎಂದು ಪತ್ರಿಕೆಗಳು ಬರೆದಿದ್ದವು. ಒಂದು ಹಂತದಲ್ಲಿ ನಿಮ್ಮ ಮತ್ತು ರಕ್ಷಿತಾ ನಡುವಿನ ಕೋಳಿ ಜಗಳ, ಪ್ರೇಕ್ಷಕರಿಗೆ ಕಾಸಿಲ್ಲದ ಮನರಂಜನೆಯಾಗಿತ್ತು. ಆಮೇಲೆ ಬಂದ ತನನಂ ತನನಂ ಚಿತ್ರದಲ್ಲಿ ನೀವು ಚೆನ್ನಾಗಿಯೇ ಅಭಿನಯಿಸಿದಿರಿ, ಆದರೆ ಚಿತ್ರ ಗೆಲ್ಲಲಿಲ್ಲ. ಆ ವಿಷ್ಯಾ ಬಿಡಿ.
ಒಂದು ವಿಷ್ಯಾ ಹೇಳಲಾ, ರಕ್ಷಿತಾಗಿಂತಲೂ ನೀವೇ ಅದೃಷ್ಟವಂತರು. ಟಿ.ಎನ್.ಸೀತಾರಾಂ, ನಾಗತಿಹಳ್ಳಿ ಚಂದ್ರಶೇಖರ್, ಕವಿತಾ ಲಂಕೇಶ್ ಸೇರಿದಂತೆ ಅನೇಕ ಉತ್ತಮ ನಿರ್ದೇಶಕರ ಜೊತೆ ಕೆಲಸ ಕಲಿಯೋ ಅವಕಾಶ ನಿಮ್ಮದಾಗಿದೆ. ಆದರೂ ನೀವು ಮನಸ್ಸಿನಲ್ಲಿ ಉಳಿಯೋ ಅಂಥಾ ಒಂದು ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಚಿತ್ರರಂಗ ನಿಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ, ನೀವು ಚಿತ್ರರಂಗವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ ಗೊತ್ತಾಗುತ್ತಿಲ್ಲ.
ನಿಮ್ಮಲ್ಲಿ ರೂಪವಿತ್ತು, ಪ್ರತಿಭೆಯಿತ್ತು, ಎಲ್ಲರ ಸೆಳೆಯುವ ಮಾದಕತೆ ಇತ್ತು, ಕನ್ನಡತಿ ಎಂಬ ವಿಶೇಷ ಹೆಗ್ಗಳಿಕೆಯೂ ಇತ್ತು. ಹೀಗಾಗಿ ನೀವು ಕನ್ನಡ ಚಿತ್ರರಂಗದ ರಾಣಿಯಾಗಿ ಮೆರೆಯಬಹುದಿತ್ತು. ರಾಧಿಕಾ ಬೇರೆ ಕಾರಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಅಪ್ರಸ್ತುತರಾದರು. ರಕ್ಷಿತಾ ಮದುವೆಯಾದರು. ಮನೆ ಆಗ ಖಾಲಿ ಇತ್ತು. ಅದರಲ್ಲೂ ರಕ್ಷಿತಾ ಮನೆಗೆ ಹೋದ ತಕ್ಷಣ, ನೀವು ರಾಣಿಯಾಗ್ತೀರಾ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಆ ರೀತಿ ಆಗಲಿಲ್ಲ. ಹೊಸಬರ ಅಲೆಯಲ್ಲಿ ನೀವು ಕೊಚ್ಚಿ ಹೋದಿರಿ.
ಈಗಂತೂ ನೀವು ಪತ್ತೇನೇ ಇಲ್ಲ. ಆಯಮ್ಮನ ಕೊಬ್ಬು ಜಾಸ್ತಿಯಾಗಿದೆ.. ಹೀಗಾಗಿ ಆ ಸಿನಿಮಾದಿಂದ ಕೈಬಿಡಲಾಯಿತು..ಈ ಸಿನಿಮಾದಿಂದ ಕೈಬಿಡಲಾಯಿತು ಎಂದು ಆಗಾಗ ಮಾತ್ರ ನಾವು ನಿಮ್ಮ ಬಗ್ಗೆ ಓದುತ್ತಿರುತ್ತೇವೆ. ತಮಿಳಲ್ಲಿ ಅವಕಾಶಕ್ಕಾಗಿ ನೀವು ಅಂಗಲಾಚುತ್ತಿರುವಿರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಂಗಲಾಚುವ ಸ್ಥಿತಿ ನಿಮಗೆ ಬರಬಾರದಿತ್ತು. ಇಷ್ಟಕ್ಕೂ ಕನ್ನಡಿಗರು ಏನ್ ಕಮ್ಮಿ ಮಾಡಿದ್ದಾರೆ.. ಯಾಕೆ ನೀವು ತಮಿಳಿಗೆ ಹೋದಿರಿ? ಹೋದದ್ದು ಯಾಕೆ? ಆ ಚಿತ್ರಗಳ ಸ್ಟಿಲ್ ಗಳನ್ನು ಕಂಡರೆ, ನಮ್ಮ ಮೈ ಎಲ್ಲಾ ಉರಿದು ಹೋಗುತ್ತಿದೆ. ಆ ಪರಿಯಲ್ಲಿ ನೀವು ಕಾಣಿಸಿಕೊಳ್ಳುವುದನ್ನು ನಾವಂತೂ ಖಂಡಿಸುತ್ತೇವೆ.
ನೀವು ಈಗಲೂ ಸ್ಯಾಂಡಲ್ ವುಡ್ ಗೆ ಬನ್ನಿ.. ಸ್ವಲ್ಪ ದಿನ ಕಾದರೆ ಪ್ರಪಂಚ ಮುಳುಗೋದಿಲ್ಲ. ಕೆಲಸಕ್ಕೆ ಬಾರದ ನೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳೋದಕ್ಕಿಂತ, ಒಂದೈದು ಒಳ್ಳೆ ಚಿತ್ರದಲ್ಲಿ ಅಭಿನಯಿಸಿದರೆ, ಅದೇ ಸಾರ್ಥಕತೆ. ತಾರಾ ಮತ್ತು ಜಯಮಾಲಾ ರೀತಿ ರಾಷ್ಟ್ರಪ್ರಶಸ್ತಿ ಪಡೆಯೋ ಹಂಬಲ ನಿಮಗಿಲ್ವಾ? ಚರ್ಮ ಸುಕ್ಕಾಗುವ ಮುನ್ನ ಕಾಸು ಬಾಚೋದು ನಿಮ್ಮ ಉದ್ದೇಶ ಆಗಿರಲಿಕ್ಕಿಲ್ಲ ಎಂದು ನಾವಂದು ಕೊಂಡಿದ್ದೇವೆ. ಇಷ್ಟರ ಮೇಲೆ ನಿಮ್ಮಿಷ್ಟ.
ಮತ್ತೆ ಶುರುವಾಗಲಿ ರಮ್ಯ ಚೈತ್ರ ಕಾಲ..
-ಹ.ಚ.ನಟೇಶ ಬಾಬು