ನಟಿ ರಮ್ಯಾ ಹೊಸ ಗಲಭೆಗೆ ಕಾರಣಕರ್ತ ಕವಿರಾಜ್
ಕನ್ನಡ ಚಲನಚಿತ್ರಗಳ ಹೃದಯಸ್ಪರ್ಶಿ ಗೀತಸಾಹಿತಿ ಕವಿರಾಜ್ ಈ ರೀತಿ ರಮ್ಯಾರ ಗಲಭೆಗೆ ಕಾರಣಕರ್ತರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ! ಆದರೂ ಈ ಗಲಭೆ ನಡೆದುಹೋಗಿದೆ. ಅದೇನು ಅಂತಹ ಗಲಭೆ ಎಂದಿರಾ? ರಮ್ಯಾ ಹೋದಲ್ಲೆಲ್ಲಾ ಗಲಭೆ ಗಲಭೆಯಂತೆ.
'ಜಾನಿ ಮೇರಾ ನಾಮ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ "ಊರಿಗೊಬ್ಳೆ ಪದ್ಮಾವತಿ..." ಎಂದು ಕುಣಿದು ಪಡ್ಡೆಗಳ ಪಾಲಿಗೆ ಹೊಸ ಐಟಂ ಗರ್ಲ್ ಆಗಿ ಉದಯಿಸಿದ ರಮ್ಯಾಗೆ ಈಗ ಮತ್ತೊಂದು ಐಟಂ ಸಾಂಗ್ನಲ್ಲಿ ಚಾನ್ಸ್ ಸಿಕ್ಕಿದೆ. ಅದೂ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದಲ್ಲಿ.
ಕವಿತಾ ಲಂಕೇಶ್ ನಿರ್ದೇಶಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ಕ್ರೇಜಿಲೋಕ' ಚಿತ್ರದ ಈ ಐಟಂ ಹಾಡನ್ನು ಕವಿರಾಜ್ ಬರೆದಿದ್ದಾರೆ. ರಮ್ಯಾರನ್ನೇ ಉದ್ದೇಶವಾಗಿಟ್ಟುಕೊಂಡು ಸಾಹಿತ್ಯ ಹೆಣೆದರೋ ಏನೋ ಗೊತ್ತಿಲ್ಲ.
"ಗಲಭೆ ಗಲಭೆ...ನಾ ಹೋದಲ್ಲೆಲ್ಲಾ ಗಲಭೆ; ಆಚೆ ಸಿನಿಮಾದವರು ಹೀರೋಯಿನ್ ಆಗಿರು ಅಂತಾರೆ, ಈಚೆ ರಾಜಕೀಯದವರು ಪಾಲಿಟಿಕ್ಸ್ಗೆ ಬಾ ಅಂತಾರೆ..." ಎಂಬ ಹಾಡನ್ನು ರಚಿಸಿದ್ದಾರೆ. ಹಾಡಿನ ಸಾಹಿತ್ಯ ನೋಡಿ ರಮ್ಯಾರನ್ನು ಕವಿತಾ ಸಂಪರ್ಕಿಸಿದ್ದಾರೆ. ರಮ್ಯಾ ಕೂಡ ಓಕೆ ಎಂದಿದ್ದಾರೆ.
ಸದ್ಯಕ್ಕೆ ವಿದೇಶದಲ್ಲಿರುವ ರಮ್ಯಾ ಹಿಂತಿರುಗಿದ ಬಳಿಕ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಈಗಾಗಲೆ 'ಕ್ರೇಜಿಲೋಕ' ಚಿತ್ರೀಕರಣ ಬಹುಪಾಲು ಮುಗಿದಿದೆ. ರವಿಮಾಮನ ಜೊತೆ ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ ನಾಯಕಿಯರಾಗಿ ಅಭಿನಯಿಸಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











