ಕರ್ಮಯೋಗಿ ಡಾ.ಕೆ.ಎಸ್.ಅಶ್ಚತ್ಥ್ ಸಾಕ್ಷ್ಯಚಿತ್ರ
ಅಮೃತ ಮಹೋತ್ಸವ ಕಂಡಿರುವ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಕಲಾವಿದ ಕೆ.ಎಸ್ ಅಶ್ವಥ್. ಚಿತ್ರರಂಗದ ಒಳಗೂ ಹೊರಗೂ ಸರಳ ಸಜ್ಜನ ಎನಿಸಿ ಎಲ್ಲರಿಗೂ ಆಪ್ತವಾಗಿದ್ದ ಹಿರಿಯ ನಟ ಅಶ್ವಥ್ ಅವರ ಖಾಸಗಿ ಜೀವನ, ಅವರ ನಡೆ-ನುಡಿ, ಇಷ್ಟ ಕಷ್ಟ ನಷ್ಟ ಹೀಗೆ ಹತ್ತು ಹಲವು ಅಂಶಗಳನ್ನು ಒಳಗೊಂಡ ಸುಂದರ ಸಾಕ್ಷ್ಯಚಿತ್ರವನ್ನು ಅವರ ಪುತ್ರ ಶಂಕರ್ ಅಶ್ವಥ್ ರೂಪಿಸಿದ್ದಾರೆ.
ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೆ.ಎಸ್.ಅಶ್ವತ್ಥ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪು ಸದಾ ಹಸಿರಾಗಿರುತ್ತದೆ. ಅವರ ಬಗ್ಗೆ ಸಾಮಾನ್ಯ ಪ್ರೇಕ್ಷಕರಿಗೆ ಗೊತ್ತಿಲ್ಲದ ಹತ್ತು-ಹಲವು ಅಂಶಗಳನ್ನು ಬಿಚ್ಚಿಡಲು ನಟ ಶಂಕರ್ ಅಶ್ವತ್ಥ್ ಮುಂದಾಗಿದ್ದಾರೆ. ಅದು 'ಕರ್ಮಯೋಗಿ ಡಾ.ಕೆ.ಎಸ್.ಅಶ್ಚತ್ಥ್" ಎಂದು ಸಾಕ್ಷ್ಯಚಿತ್ರಕ್ಕೆ ಹೆಸರಿಟ್ಟಿದ್ದಾರೆ.
ಆದರೆ ಶಂಕರ್ ಗೆ ಸಮಸ್ಯೆ ಎದುರಾಗಿದೆ. ಸಾಕ್ಷ್ಯ ಚಿತ್ರವನ್ನು ಯಾವುದಾದರೂ ಖಾಸಗಿ ವಾಹಿನಿಯವರು ಮುಂದೆ ಬಂದು ಪ್ರಸಾರದ ಹಕ್ಕು ಕೊಂಡರೆ ಸಾಕು ಎನ್ನುತ್ತಿದ್ದಾರೆ. ಸಾಕ್ಷ್ಯಚಿತ್ರದ ಪೂರ್ವ ತಯಾರಿ, ಮಾಹಿತಿ ಸಂಗ್ರಹಣೆ, ನಿರ್ವಹಣಾ ವೆಚ್ಚ ಎಲ್ಲ ಸೇರಿ ಸುಮಾರು 3 ಲಕ್ಷ ರೂಗೂ ಅಧಿಕ ಹಣವನ್ನು ಈಗಾಗಲೇ ಶಂಕರ್ ಖರ್ಚು ಮಾಡಿದ್ದಾರೆ.
ಸಾಕ್ಷ್ಯಚಿತ್ರದ ಬಗ್ಗೆ ವಿಷಯ ತಿಳಿದ ಪ್ರಬುದ್ಧನಟ ಪ್ರಕಾಶ್ ರೈ, ಯಾವುದೇ ಸಹಾಯ ಬೇಕಾದರೂ ಕೇಳಿ ಎಂದಿದ್ದಾರೆ. ಸಂಪಾದಕರೊಬ್ಬರು ಅಶ್ವಥ್ ಅವರ ಕೊನೆಗಾಲದಲ್ಲಿ ಮಾಸಿಕಕ್ಕೆ ಇಷ್ಟು ಎಂದು ನೀಡುತ್ತಾ ಆರ್ಥಿಕ ಸಹಾಯ ಮಾಡುತ್ತಿದ್ದರು ಆಮೇಲೆ ಅಶ್ವಥ್ ಕಾಲವಾದ ಮೇಲೆ ಅವರ ಕುರಿತು ದೊಡ್ಡ ಗ್ರಂಥ ರಚಿಸುವುದಾಗಿ ಹೇಳಿಕೊಂಡು ತಿರುಗಾಡಿ ಕೊನೆಗೆ ಎಲ್ಲವನ್ನೂ ಹಠಾತ್ ಆಗಿ ನಿಲ್ಲಿಸಿಬಿಟ್ಟರು. ಆದರೆ, ಅಪ್ಪನ ಹೆಸರು ಬಳಸಿಕೊಂಡು ಚಂದಾ ಎತ್ತುವ ಪೈಕಿ ನಾನಲ್ಲ ಎನ್ನುತ್ತಾರೆ ಶಂಕರ್.
ಪ್ರತಿ ಎಪಿಸೋಡ್ ಗೆ 5 ಸಾವಿರ ರೂನಂತೆ ಬೇಡಿಕೆ ಇಟ್ಟಿದ್ದಾರೆ ಶಂಕರ್, ಸಂಭಾವನೆ ಹಾಗೂ ಹಣ ದೇಣಿಗೆ ವಿಷಯದಲ್ಲಿ ಅಪ್ಪನಂತೆ ಅಚಲ ನಿರ್ಧಾರ ಹೊಂದಿರುವ ಸ್ವಾಭಿಮಾನಿ ಶಂಕರ್ ಗೆ ಒಳ್ಳೆಯದಾಗಲಿ. ನಾಡಿನ ಎಲ್ಲರಿಗೂ ಅಶ್ವಥ್ ಅವರ ಜೀವನಗಾಥೆ ಆದಷ್ಟು ಬೇಗ ತಿಳಿಯುವಂತಾಗಲಿ.


Click it and Unblock the Notifications











