ದರ್ಶನ್ ತೂಗುದೀಪನಿಗೆ ಈಗ ಮೀರಾ ಭಜನೆ
ದೆಹಲಿ ಮೂಲದ ಮಾಜಿ ರೂಪದರ್ಶಿ, ನಟಿ ಮೀರಾ ಛೋಪ್ರಾ ನಮ್ಮ ದರ್ಶನ್ ತೂಗುದೀಪನ ನಾಯಕಿಯಾಗಿದ್ದಾಳೆ. ದರ್ಶನ್ ಅವರ ಸ್ವಮೇಕ್ ಚಿತ್ರ ಅರ್ಜುನ್ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾಳೆ. ಸಾಹುರಾಜ್ ಶಿಂಧೆ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಮುಂಚೆ ದರ್ಶನ್ ಹಾಗೂ ಆದಿತ್ಯ ಅಭಿನಯದ ಸ್ನೇಹನಾ ಪ್ರೀತಿನಾ ಎಂಬ ಭಯಾನಕ ಕಾಮಿಡಿ ಚಿತ್ರ ನಿರ್ದೇಶಿಸಿದ್ದ ಸಾಹುರಾಜ್ ಅವರಿಗೆ ಇದು ದರ್ಶನ್ ಜತೆ ಎರಡನೇ ಚಿತ್ರ. ವಿತರಕರಾದ ಜಯಣ್ಣ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ದೆಹಲಿ ಬೆಡಗಿಯ ಆಯ್ಕೆ ಬಗ್ಗೆ ತೃಪ್ತಿವ್ಯಕ್ತಪಡಿಸಿದ್ದಾರೆ.
ಮೀರಾ ಚೋಪ್ರಾ ಬ್ಯೂಟಿ ವಿತ್ ಬ್ರೇನ್:
ತಮಿಳು, ತೆಲುಗು ಚಿತ್ರರಂಗದಲ್ಲಿ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿರುವ 23 ವರ್ಷದ ನಟಿಯನ್ನು ಅಲ್ಲಿ ಕರೆಯುವುದು, ನೀಲಾ ಎಂದು. ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿರುವ ಈಕೆಗೆ ಚಿತ್ರರಂಗ ಹೊಸದೇನಲ್ಲ. ಮುಂಗಾರುಮಳೆ ಚಿತ್ರದ ರಿಮೇಕ್ ತೆಲುಗಿನ ವಾನಾ ಚಿತ್ರದಲ್ಲಿ ಬೆಂಗಳೂರಿನ ಹುಡುಗ ವಿನಯ್ ಗೆ ಜೋಡಿಯಾಗಿ ನಟಿಸಿದ್ದರು.ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಜತೆಗೆ 'ಬಂಗಾರಂ', ಅರ್ಜುನ್ ಸರ್ಜಾ ಜತೆ 'ಮರುಥಮಲೈ', ಸಿಲಂಬರಸನ್ ಜತೆ 'ಕಾಲೈ' ಜತೆ ನಟಿಸಿದ್ದಾರೆ. ಆದರೆ ವೃತ್ತಿ ಪ್ರವೃತ್ತ್ತಿಗಳ ನಡುವೆ ಆಯ್ಕೆ ಗೊಂದಲದಲ್ಲಿದ್ದ ಈಕೆಯನ್ನು 2005 ರಲ್ಲಿ ಚಿತ್ರರಂಗಕ್ಕೆ ಪರಿಚಯಿಸಿದ್ದು ನಟ, ನಿರ್ದೇಶಕ ಎಸ್. ಜೆ .ಸೂರ್ಯ.
ಅಮೆರಿಕದ ಮಿಚಿಗಾನ್ ಸಗಿನಾ ವ್ಯಾಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಮೀರಾ, ನ್ಯೂಯಾರ್ಕ್ ನಲ್ಲಿ ಸಮೂಹ ಮಾಧ್ಯಮ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿದ್ದಾರೆ.ರಾಷ್ಟ್ರೀಯ ವಾರ್ತಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ನಂತರ ಅಲ್ಲಿಂದ ರೂಪದರ್ಶಿಯಾಗಿ ಕೆಲಕಾಲ ಕಳೆದು ನಂತರ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications