ಆ ಕಾಲದ ಖಳನಟರ ಪುತ್ರರತ್ನರು ತೆರೆ ಮೇಲೆ
ತೂಗುದೀಪ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನವಗ್ರಹ ಚಿತ್ರಕ್ಕೆ ಭರದ ಚಿತ್ರೀಕರಣ ನಡೆಯುತ್ತಿದೆ. ಸುಮಾರು 18ದಿವಸಗಳ ಅವಧಿಯಲ್ಲಿ ಒಂದು ಗೀತೆ ಹಾಗೂ ಕೆಲವು ಮಾತಿನಭಾಗದ ಚಿತ್ರೀಕರಣವನ್ನು ಮೈಸೂರಿನಲ್ಲಿ ಪೂರೈಸಿ ಬಂದಿರುವ ನವಗ್ರಹದ ತಂಡ ಬೆಂಗಳೂರಿಗೆ ಮರಳಿದೆ. ಬೆಂಗಳೂರಿನಲ್ಲಿ ಕೆಲವು ಭಾಗದ ಚಿತ್ರೀಕರಣ ನಡೆಸಿದ ನಂತರ ಸಕಲೇಶಪುರಕ್ಕೆ ತೆರಳುತ್ತಿರುವುದಾಗಿ ನಿರ್ದೇಶಕ ದಿನಕರ್ತೂಗುದೀಪ್ ತಿಳಿಸಿದ್ದಾರೆ.
'ಜೊತೆಜೊತೆಯಲಿ' ಚಿತ್ರದ ಯಶಸ್ಸಿನ ನಂತರ ಮತ್ತೊಂದು ಸಾಹಸಕ್ಕೆ ನಿರ್ದೇಶಕ ದಿನಕರ್ತೂಗುದೀಪ್ ಕೈ ಹಾಕಿದ್ದಾರೆ. ಶ್ರೀಮತಿ ಮೀನಾ ತೂಗುದೀಪಶ್ರೀನಿವಾಸ್ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಆರುಜನ ಖಳನಟರ ಪುತ್ರರು ಅಭಿನಯಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದು ಮೊದಲ ಪ್ರಯತ್ನ ಎಂದರೆ ತಪ್ಪಾಗಲಾರದು. ನಿರ್ದೇಶಕರೇ ನವಗ್ರಹಕ್ಕೆ ಕಥೆ, ಚಿತ್ರಕಥೆ, ಬರೆದಿದ್ದಾರೆ.
ವಿ.ಹರಿಕೃಷ್ಣ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ, ತ್ರಿಭುವನ್ ನೃತ್ಯ, ರವಿವರ್ಮ ಸಾಹಸ, ಚಿಂತನ್ ಹಾಗೂ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಸುಂದರಂ ಕಲೆ, ಮಲ್ಲಿಕಾರ್ಜುನ್(ಗದಗ) ಸಹನಿರ್ದೇಶನ, ಸುಂದರರಾಜ್, ಶ್ರೀನಿವಾಸ್ ನಿರ್ಮಾಣನಿರ್ವಹಣೆ ಹಾಗೂ ವಿಜಯ್ ಸಹ ನಿರ್ಮಾಪಕರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ದರ್ಶನ್, ಸೃಜನ್ಲೋಕೇಶ್, ವಿನೋದ್ಪ್ರಭಾಕರ್, ತರುಣ್ಸುಧೀರ್, ಗಿರಿದಿನೇಶ್, ನಾಗೇಂದ್ರ ಅರಸ್, ಧರ್ಮಕೀರ್ತಿರಾಜ್, ಸೌರವ್, ಶರ್ಮಿಳಾಮಾಂಡ್ರೆ ಹಾಗೂ ವರ್ಷ ಮುಂತಾದವರಿದ್ದಾರೆ. ಆದರೆ ಶರ್ಮಿಳಾ ಮಾಂಡ್ರೆ ಹಾಗೂ ನೆನಪಿರಲಿ ಖ್ಯಾತಿಯ ವರ್ಷಾ ಅವರ ಅಪ್ಪಂದಿರು ಯಾವ ಚಿತ್ರದಲ್ಲಿ ಖಳನಾಯಕರಾಗಿದ್ದರು ಅಂತಾ ಗಾಂಧಿನಗರ ಕೇಳುತ್ತಿರುವ ಪ್ರಶ್ನೆಗೆ ಉತ್ತರ ದೊರೆಯದೆ ,ದಿನಕರ್ ಪ್ರಶ್ನೆ ಕೇಳದಂತೆ ಓಡಾಡುತ್ತಿದ್ದಾರಂತೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications